ಕಲಬುರ್ಗಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತಿರುವ ಎಸ್.ಕೆ.ಕಾಂತಾ ಅವರನ್ನು ಬುಧವಾರ ಭೇಟಿ ಮಾಡಿದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರು ಬೆಂಬಲ ಸೂಚಿಸಿದರು.
ಕೆರೆಗಳ ಸಂರಕ್ಷಣೆ, ಒತ್ತುವರಿ ಹಾಗೂ ಉದ್ಯಾನಗಳ ಅತಿಕ್ರಮಣ ತೆರವುಗೊಳಿಸುವುದು, ವಕ್ಫ್ ಆಸ್ತಿ ಸಂರಕ್ಷಣೆ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಕಾಂತಾ ಅವರು ಡಿ. 31ರಿಂದ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.
‘ಕಾಂತಾ ಅವರ ಹೋರಾಟ ಮತ್ತು ಸಾಮಾಜಿಕ ಕಾರ್ಯಗಳಿಗೆ ನನ್ನ ಬೆಂಬಲವಿದೆ. ಅವರ ಹೋರಾಟ ಹೋರಾಟ ಯಶಸ್ವಿಯಾಗಲಿ’ ಸಂತೋಷ ಹೆಗ್ಡೆ ಎಂದು ಶುಭ ಕೋರಿದರು.
ಪಾಲಿಕೆ ಮಾಜಿ ಸದಸ್ಯ ಅಸ್ಲಂ ಕಲ್ಯಾಣಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಾ. ಸಜ್ಜನ ಮಲ್ಲೇಶಿ, ರಾಜ್ಯ ಸಂಘಟನಾ ಸಂಚಾಲಕ ಅರ್ಜುನ ಭದ್ರೆ, ಶಾಂತಕುಮಾರ ಬಿರಾದಾರ, ನಾಗಲಿಂಗಯ್ಯ ಮಠಪತಿ ಇದ್ದರು.