ಅಫಜಲಪುರ: ತಾಲ್ಲೂಕಿನ ಹಿರೇ ಜೇವರ್ಗಿ ಗ್ರಾಮದ ಸುರೇಖಾ ಭೀಮಶಂಕರ್ ಬಿರಾದಾರ್ ಅವರ 3 ಎಕರೆ ಕಬ್ಬು ಶನಿವಾರ ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ನಾಶವಾಗಿದೆ.
ಕಬ್ಬಿನ ಗದ್ದೆಯಲ್ಲಿ ಹಾದುಹೋಗಿರುವ ವಿದ್ಯುತ್ ಲೈನ್ಲ್ಲಿ ಶಾರ್ಟ್ ಸರ್ಕಿಟ್ನಿಂದ ಕಿಡಿ ಹಾರಿ ಬೆಂಕಿ ಹೊತ್ತಿಕೊಂಡಿತು ಎನ್ನಲಾಗಿದೆ.
‘ಕಬ್ಬು ನಾಶವಾಗಿ ಸುಮಾರು ₹6 ಲಕ್ಷ ಹಾನಿಯಾಗಿದೆ. ಕಳೆದ ಏಪ್ರಿಲ್– ಮೇ ತಿಂಗಳಲ್ಲಿ ಕೊಳವೆಬಾವಿ ಬತ್ತಿದಾಗ ₹50 ಸಾವಿರ ಖರ್ಚು ಮಾಡಿ ಟ್ಯಾಂಕರ್ ನೀರು ಖರೀದಿ ಮಾಡಿ ಕಬ್ಬು ಜೋಪಾನ ಮಾಡಿದ್ದೆ. ಬೆಳೆ ನಿರ್ವಹಣೆಗಾಗಿ ಬ್ಯಾಂಕಿನಲ್ಲಿ ₹2 ಲಕ್ಷ ಸಾಲ ಮಾಡಿದ್ದೇನೆ’ ಎಂದು ಸುರೇಖಾ ತಿಳಿಸಿದರು.
‘ಕಬ್ಬು ಕಳೆದುಕೊಂಡ ರೈತರಿಗೆ ಜೆಸ್ಕಾಂ ಪರಿಹಾರ ನೀಡಬೇಕು’ ಎಂದು ತಾಲ್ಲೂಕು ರೈತ ಸಂಘದ ಶ್ರೀಮಂತ ಬಿರಾದಾರ್ ಒತ್ತಾಯಿಸಿದ್ದಾರೆ.