ಕಲಬುರ್ಗಿ: ‘ಸರ್ಕಾರ ಕೌಶಲ್ಯಾಭಿವೃದ್ಧಿಗೆ ಅನೇಕ ಯೋಜನೆಗಳನ್ನು ತಂದಿದೆ. ಯುವಕರು ಅವುಗಳ ಸದುಪಯೋಗ ಪಡೆದುಕೊಂಡು ಉದ್ಯೋಗದಲ್ಲಿ ತೊಡಗಬೇಕು’ ಎಂದು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಶಂಕರ ಪಂಚಾಳ ಹೇಳಿದರು.
ಜನ ಶಿಕ್ಷಣ ಸಂಸ್ಥಾನವು ನಗರದ ಕುವೆಂಪು ಕಾಲೋನಿಯಲ್ಲಿ ಸೋಮವಾರ ಆಯೋಜಿಸಿದ್ದ ಕೌಶಲ್ಯಾಭಿವೃದ್ಧಿ ತರಬೇತಿಯ ಸಮರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಕಾಲಕ್ಕೆ ತಕ್ಕಂತೆ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಉದ್ಯೋಗ ಪಡೆದುಕೊಳ್ಳಬಹುದು. ಸ್ವಂತ ಉದ್ಯೋಗವನ್ನು ಸಹ ಮಾಡಬಹುದು’ ಎಂದರು.
ಜನ ಶಿಕ್ಷಣ ಸಂಸ್ಥಾನದ ನಿರ್ದೇಶಕ ಲಕ್ಷ್ಮೀಕಾಂತ ಪಾಟೀಲ ಮಾತನಾಡಿ,‘ನಮ್ಮ ದೇಶದ ಮಹಿಳೆಯರು ತುಂಬಾ ಸೃಜನಶೀಲರು. ಆ ಸೃಜನಶೀಲತೆಯನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದು ತಿಳಿದಿಲ್ಲ. ಕೌಶಲ್ಯಾಭಿವೃದ್ಧಿ ಯೋಜನೆಗಳ ಅಡಿ ತರಬೇತಿ ಪಡೆದರೆ ಅವರು ಸ್ವಾವಲಂಬಿಗಳಾಗಬಹುದು’ ಎಂದು ಹೇಳಿದರು.
ನಿವೃತ್ತ ಪಿಎಸ್ಐ ಭಗವಾನ ಭರ್ವೆ ಮಾತನಾಡಿ,‘ಕೌಶಲ್ಯಾಭಿವೃದ್ಧಿ ಯೋಜನೆಗಳಿಂದ ಮಹಿಳೆಯರಿಗೆ ಅನುಕೂಲವಾಗಲಿದೆ’ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ತಾರಾಮತಿ ಭಗವಾನ ಭರ್ವೆ, ಪಾರ್ವತಿ ಹಿರೇಮಠ, ಕಾಶಿರಾಯ ಜೋಗದನಕರ ಹಾಗೂ ಕುಮಾರಿ ಓಂಕಾರಮ್ಮ ಇದ್ದರು.