ಕಲಬುರ್ಗಿ: ಇಲ್ಲಿನ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅಭಿಮಾನಿ ಬಳಗದ ವತಿಯಿಂದನಗರದ ಕಲಾ ಮಂಡಳದಲ್ಲಿ ಖ್ಯಾತ ಚಲನಚಿತ್ರ ಗಾಯಕರಾದ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಶನಿವಾರ ‘ಗೀತ ನಮನ’ ಸಲ್ಲಿಸಲಾಯಿತು. ಗಾಯಕರು ಎಸ್ಪಿಬಿ ಅವರ ಹಾಡುಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
ಕಾರ್ಯಕ್ರಮ ಉದ್ಘಾಟಿಸಿದಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್ ಠಾಕೂರ್ ಮಾತನಾಡಿ, ‘40 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಜೀವ ತುಂಬಿರುವ ಗಾಯಕ ಬಾಲಸುಬ್ರಮಣ್ಯಂ ಅವರು ಸಂಗೀತ ಲೋಕದ ದಿಗ್ಗಜ ಎಂದೇ ಖ್ಯಾತರಾಗಿದ್ದಾರೆ. ಅವರ ಧ್ವನಿ ಅಸಂಖ್ಯಾತ ಜೀವಗಳಿಗೆ ಚೈತನ್ಯ ನೀಡಿದೆ. ಯುವ ಗಾಯಕರಿಗೆ ಪ್ರೇರಣೆಯಾಗಿದೆ’ ಎಂದರು.
‘ದೇಶದ 16 ಭಾಷೆಗಳಲ್ಲಿಯೂ ಹಾಡಿದ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಅಪ್ರತಿಮ ಸೇವೆಗಾಗಿ ನೀಡುವ ‘ನಂದಿ ಪ್ರಶಸ್ತಿ’ಯನ್ನು ಏಳು ಬಾರಿ ಪಡೆದ ದೇಶದ ಏಕೈಕ ಗಾಯಕ ಎಂಬ ಹೆಗ್ಗಳಿಕೆಯೂ ಅವರದು’ ಎಂದರು.
ಪತ್ರಕರ್ತ ಪಿ.ಎಂ. ಮಣ್ಣೂರ ಅಧ್ಯಕ್ಷತೆ ವಹಿಸಿದ್ದರು.ದೂರದರ್ಶನ ಕೇಂದ್ರದ ನಿವೃತ್ತ ನಿರ್ದೇಶಕ ಎಂ.ಬಿ. ಪಾಟೀಲ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ, ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಬಿ.ಎಚ್. ನಿರಗುಡಿ, ವಿನೋದಕುಮಾರ ಜನವರಿ, ಪವನಕುಮಾರ ವಳಕೇರಿ ಇದ್ದರು.
ಸುಜಾತಾ ಕುಲಕರ್ಣಿ,ಆಕಾಂಕ್ಷಾ ಪುರಾಣಿಕ, ಚಾಮರಾಜ ದೊಡ್ಡಮನಿ, ಗೋಪಾಲ ಕುಲಕರ್ಣಿ, ಡಾ.ರಾಜಶೇಖರ ಮಾಂಗ, ಪ್ರಕಾಶ ದಂಡೋತಿ, ಆನಂದ ಪಾಟೀಲ, ಕವಿರಾಜ ನಿಂಬಾಳ, ಕಿರಣ್ ಪಾಟೀಲ, ರಾಮು ಶಿವಪುರ ಅವರು ಎಸ್ಪಿಬಿ ಅವರ ಹಾಡುಗಳನ್ನು ಹಾಡಿ ನಮನ ಸಲ್ಲಿಸಿದರು.