ಕಲಬುರ್ಗಿ: ಈ ಭಾಗದ ಜನತೆಯ ಬೇಡಿಕೆಗೆ ಮಣಿದಿರುವ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಗಣೇಶೋತ್ಸವಕ್ಕೆ ಬರಲಿರುವ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು–ಕಲಬುರ್ಗಿ ಮಧ್ಯೆ ವಿಶೇಷ ರೈಲನ್ನು ಆರಂಭಿಸಿದ್ದಾರೆ.
ಆಗಸ್ಟ್ 30ರಂದು ಬೆಂಗಳೂರಿನ ಯಲಹಂಕ ರೈಲು ನಿಲ್ದಾಣದಿಂದ ಸಂಜೆ 5ಕ್ಕೆ ಹೊರಟು ಆ 31ರಂದು ನಸುಕಿನ 4.20ಕ್ಕೆ ಕಲಬುರ್ಗಿ ತಲುಪಲಿದೆ. ಮರಳಿ ಸೆಪ್ಟೆಂಬರ್ 2ರಂದು ರಾತ್ರಿ 8.30ಕ್ಕೆ ಕಲಬುರ್ಗಿಯಿಂದ ಹೊರಡುವ ವಿಶೇಷ ರೈಲು ಸೆ 3ರಂದು ಬೆಳಿಗ್ಗೆ 7.25ಕ್ಕೆ ಯಲಹಂಕ ರೈಲು ನಿಲ್ದಾಣ ತಲುಪಲಿದೆ.
ಈ ರೈಲಿನಲ್ಲಿ 3 ಎ.ಸಿ. ಬೋಗಿಗಳು, 12 ಸ್ಲೀಪರ್ ಮತ್ತು 2 ಸಾಮಾನ್ಯ, ಲಗೇಜ್ ಸೇರಿದಂತೆ ಒಟ್ಟು 16 ಕೋಚುಗಳು ಇರಲಿವೆ. ಗೌರಿಬಿದನೂರು, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಮಂತ್ರಾಲಯ ರೋಡ್, ರಾಯಚೂರು, ಯಾದಗಿರಿ, ವಾಡಿ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.
ಪ್ರತಿ ಬಾರಿ ಹಬ್ಬದ ಸಂದರ್ಭದಲ್ಲಿ ಉಂಟಾಗುವ ಪ್ರಯಾಣಿಕರ ದಟ್ಟಣಿ ನಿವಾರಿಸಲು ರೈಲ್ವೆ ಇಲಾಖೆ ಬೆಂಗಳೂರು–ಬೆಳಗಾವಿ ಮಧ್ಯೆ ವಿಶೇಷ ರೈಲು ಓಡಿಸುತ್ತಿತ್ತು. ಈ ಸೌಲಭ್ಯ ಕಲಬುರ್ಗಿ ಭಾಗದ ಪ್ರಯಾಣಿಕರಿಗೆ ಏಕೆ ವಿಸ್ತರಿಸುತ್ತಿಲ್ಲ ಎಂದು ಈ ಭಾಗದ ಪ್ರಯಾಣಿಕರು ಸಚಿವ ಸುರೇಶ್ ಅಂಗಡಿ ಅವರಿಗೆ ಟ್ವಿಟ್ಟರ್ನಲ್ಲಿ ಪ್ರಶ್ನಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಸಚಿವರು ಕಲಬುರ್ಗಿಗೆ ವಿಶೇಷ ರೈಲು ಓಡಿಸಲು ಇಲಾಖೆಗೆ ಸೂಚಿಸಿದ್ದರು.ಬೆಂಗಳೂರಿನಿಂದ ಕಲಬುರ್ಗಿಗೆ ಸ್ಲೀಪರ್ ಕೋಚ್ ದರ ₹ 395 ಹಾಗೂ ಎಸಿ ತ್ರಿಟಯರ್ ಪ್ರಯಾಣ ದರ ₹ 1095 ಇದೆ.
ಮಂಗಳೂರಿಗೆ ವಿಶೇಷ ರೈಲು ಬೆಂಗಳೂರು: ಗಣೇಶ ಚತುರ್ಥಿ ಅಂಗವಾಗಿ ನೈರುತ್ಯ ರೈಲ್ವೆಯು ಬೆಂಗಳೂರು– ಮಂಗಳೂರು ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲು ಓಡಿಸಲಿದೆ.
ಆ.30ರಂದು ರಾತ್ರಿ 10.20ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಿಗ್ಗೆ 8.30ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಚಿಕ್ಕಬಾಣಾವರ, ಕುಣಿಗಲ್, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ, ಕಬಕ ಪುತ್ತೂರು, ಬಂಟ್ವಾಳ, ಪಡೀಲುನಲ್ಲಿ ರೈಲು ನಿಲ್ಲಲಿದೆ.
ಸೆ.2ರಂದು ರಾತ್ರಿ 10.15ಕ್ಕೆ ಮಂಗಳೂರಿನಿಂದ ಹೊರಟು ಮರುದಿನ ಬೆಳಿಗ್ಗೆ 8 ಗಂಟೆಗೆ ಯಶವಂತಪುರ ತಲುಪಲಿದೆ.