ಆಳಂದ: ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಸೋಮವಾರ ವಿದ್ಯಾರ್ಥಿಗಳು ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ತರಗತಿಗಳು ಬಹಿಷ್ಕರಿಸಿ ಪ್ರತಿಭಟನೆ ಕೈಗೊಂಡ ಘಟನೆ ನಡೆಯಿತು.
ಕಾಲೇಜುಗಳು ಆರಂಭವಾಗಿ 3 ತಿಂಗಳು ಕಳೆದರೂ ನಿಗದಿತವಾಗಿ ತರಗತಿಗಳು ನಡೆಯುತ್ತಿಲ್ಲ. ವಿದ್ಯಾರ್ಥಿನಿಯರ ಶೌಚಾಲಯ ಅನಾನುಕೂಲಗಳು ಹಾಗೂ ಕೆಲ ಕಿಡಗೇಡಿಗಳ ಅನುಚಿತ ವರ್ತನೆಗಳಿಂದ ಬೇಸತ್ತು ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿಯೇ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಕಾಲೇಜು ಪ್ರಾಚಾರ್ಯ, ಪ್ರಾಧ್ಯಾಪಕರು ವಿದ್ಯಾರ್ಥಿಗಳ ಮನವೊಲಿಸುವ ಪ್ರಯತ್ನ ನಡೆಸಿದರು. ವಿದ್ಯಾರ್ಥಿಗಳು ಕುಲಪತಿಗಳು ಹಾಗೂ ಪದವಿ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಭರವಸೆ ನೀಡುವವರೆಗೂ ಪ್ರತಿಭಟನೆ ಕೈಗೊಳ್ಳಲು ಪಟ್ಟು ಹಿಡಿದರು.
ವಿದ್ಯಾರ್ಥಿಗಳಾದ ಪಲ್ಲವಿ ಖಾನಾಪುರ, ಸಿದ್ದರಾಮ ಪೂಜಾರಿ, ಪೂಜಾ, ರೋಷನಿ ಮಾತನಾಡಿ ನಿಯಮಿತವಾಗಿ ತರಗತಿಗಳು ನಡೆಯುತ್ತಿಲ್ಲ, ಆಂತರಿಕ ಹಾಗೂ ಸೆಮಿಸ್ಟರ್ ಪರೀಕ್ಷೆಗಳು ಸಮೀಪಿಸಿದರೂ ಸಮರ್ಪಕ ತರಗತಿಗಳು ನಡೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮೀಣ ವಿದ್ಯಾರ್ಥಿನಿಯರಿಗೆ ಸೂಕ್ತ ಭದ್ರತೆ ಇಲ್ಲದ ಕಾರಣ ಕಿಡಿಗೇಡಿ ಗಳಿಂದ ನಿರಂತರ ಅನುಚಿತ ವರ್ತನೆ ಕಾಣುತ್ತಿದೆ ಎಂದು ಆಪಾದಿಸಿದರು.
ಪ್ರಾಚಾರ್ಯ ಸಿದ್ದಣ್ಣ ಪೂಜಾರಿ ಮಾತನಾಡಿ ಬೋಧಕರ ಕೊರತೆ ಹಾಗೂ ಕಾಲೇಜು ಸ್ವಂತ ಕಟ್ಟಡ ಇಲ್ಲದ ಕಾರಣ ಸಮಸ್ಯೆಗಳಿವೆ. ಕಾಲೇಜು ಆವರಣದಲ್ಲಿ ಕಿಡಿಗೇಡಿಗಳ ಉಪಟಳ ಜಾಸ್ತಿಯಾಗಿದೆ ಎಂದರು.
ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ವಿವಿಧ ಸೆಮಿಸ್ಟರ್ ವಿದ್ಯಾರ್ಥಿಗಳು ಧರಣಿಯಲ್ಲಿ ಪಾಲ್ಗೊಂಡಿದರು. ನಂತರ ವಿದ್ಯಾರ್ಥಿಗಳು ಆಳಂದ ಪೊಲೀಸ್ ಠಾಣೆಗೆ ಭೇಟಿ ನೀಡಿ ಪಿಎಸ್ಐ, ಸಿಪಿಐ ಅವರಿಗೆ ಕಾಲೇಜಿಗೆ ಸೂಕ್ತ ಮನವಿ ಸಲ್ಲಿಸಿ ಕಾಲೇಜಿಗೆ ಸೂಕ್ತ ಭದ್ರತೆ ಒದುಗಿಸಲು ಆಗ್ರಹಿಸಿದರು.