ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ ಡಿಸಿ ಕಚೇರಿ ಎದುರು ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯಿಂದ ಪ್ರತಿಭಟನೆ

Last Updated 29 ನವೆಂಬರ್ 2021, 12:46 IST
ಅಕ್ಷರ ಗಾತ್ರ

ಕಲಬುರಗಿ: ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಎಂಬಿಬಿಎಸ್ ಪರೀಕ್ಷೆಗಳನ್ನು ಜನವರಿ ಮಧ್ಯಭಾಗ ಹಾಗೂ ಅಂತಿಮ ವರ್ಷದ ಪರೀಕ್ಷೆಗಳನ್ನು ‌ಫೆಬ್ರುವರಿ ಮಧ್ಯಭಾಗದಲ್ಲಿ ನಡೆಸುವ ಸಲುವಾಗಿ ಸುತ್ತೋಲೆ ಹೊರಡಿಸಿದೆ. ಕೋವಿಡ್‌ನಿಂದಾಗಿ ತರಗತಿಗಳು ಸಕಾಲಕ್ಕೆ ನಡೆಯದೇ ಇದ್ದುದರಿಂದ ಪರೀಕ್ಷೆಗಳನ್ನು ಮುಂದಕ್ಕೆ ಹಾಕಬೇಕು ಎಂದು ಒತ್ತಾಯಿಸಿ ವೈದ್ಯಕೀಯ ವಿದ್ಯಾರ್ಥಿಗಳು ಎಐಡಿಎಸ್‌ಒ ಸಂಘಟನೆಯ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಈ ಧಿಡೀರ್ ಬದಲಾವಣೆ ರಾಜ್ಯದ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೈದ್ಯಕೀಯ ಉಪನ್ಯಾಸಕರನ್ನು ಅತ್ಯಂತ ಆತಂಕಕ್ಕೆ ದೂಡಿದೆ. ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ತರಗತಿ ಪ್ರಾರಂಭವಾಗಿದ್ದು ಮಾರ್ಚ್ ತಿಂಗಳಲ್ಲಿ. ಜೂನ್ ತಿಂಗಳವರೆಗೂ ಆನ್‌ಲೈನ್‌ನಲ್ಲಿಯೇ ತರಗತಿಗಳು ನಡೆದಿವೆ. ಈ ಕಾರಣದಿಂದ ಅಗತ್ಯವಿದ್ದಷ್ಟು ಕ್ಲಿನಿಕಲ್ ಪೋಸ್ಟಿಂಗ್ ಸಹ ಆಗಿರಲಿಲ್ಲ. ಅಲ್ಲದೆ, ಅಂತಿಮ ವರ್ಷದ ವಿದ್ಯಾರ್ಥಿಗಳು ಕೋವಿಡ್ ಸಂದರ್ಭದಲ್ಲಿ ಆಗಿನ ಅವಶ್ಯಕತೆಗೆ ಓಗೊಟ್ಟು, ಕೋವಿಡ್ ಕರ್ತವ್ಯವನ್ನು ಕೆಲವು ತಿಂಗಳುಗಳ ಕಾಲ ನಿರ್ವಹಿಸಿದ್ದರು. ಇದರೊಂದಿಗೆ ಈ ಬ್ಯಾಚ್‌ನ ವಿದ್ಯಾರ್ಥಿಗಳು ಎರಡು ತಿಂಗಳು ಟೆಲಿ ಕಮ್ಯುನಿಕೇಶನ್ ಕರ್ತವ್ಯ ನಿರ್ವಹಿಸಿದ್ದಾರೆ. ಅಂದರೆ ಒಟ್ಟಾರೆಯಾಗಿ ಈ ಎಲ್ಲಾ ಕಾರಣಗಳಿಂದ ಶೈಕ್ಷಣಿಕ ವೇಳಾಪಟ್ಟಿ ಕುಸಿದು, ಪರೀಕ್ಷೆ ತಯಾರಿಗೆ ಸಮಯ ಕಡಿಮೆಯಾಗಿದೆ. ಈಗ ಫೆಬ್ರವರಿ ಮಧ್ಯವಾರಕ್ಕೆ ಪರೀಕ್ಷೆ ಎನ್ನುವುದು ಮತ್ತಷ್ಟು ದುಗುಡಕ್ಕೆ ಕಾರಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

‘ಎರಡನೇ ವರ್ಷದ ವಿದ್ಯಾರ್ಥಿಗಳಿಗೆ 18 ತಿಂಗಳ ವೇಳಾಪಟ್ಟಿಯಿಂದ ಕೇವಲ 10 ತಿಂಗಳ ವೇಳಾಪಟ್ಟಿಗೆ ಹೊಂದಾಣಿಕೆ ಆಗುವುದೇ ದೊಡ್ಡ ಸಾಹಸವಾಗಿದೆ. ಶೈಕ್ಷಣಿಕ ವರ್ಷ ಆರಂಭವಾದ 3 ತಿಂಗಳು ಆನ್‌ಲೈನ್ ಮೂಲಕ ತರಗತಿಗಳು ನಡೆದಿವೆ. ಆದ ಕಾರಣ, ಈ ವಿದ್ಯಾರ್ಥಿಗಳಿಗೆ ಮೂಲ ವಿಷಯಗಳ ಬಗ್ಗೆ ಸಮರ್ಪಕ ಅಡಿಪಾಯ ದೊರಕಲು ಸಾಧ್ಯವಾಗಿಲ್ಲ. ಅಂತಿಮ ಪರೀಕ್ಷೆಯನ್ನು ಜನವರಿ ಮಧ್ಯಭಾಗದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಆದರೆ ಎಷ್ಟೋ ಕಾಲೇಜುಗಳು ನವೆಂಬರ್ ಕಳೆಯುತ್ತಿದ್ದರೂ 2ನೇ ಆಂತರಿಕ ಪರೀಕ್ಷೆ ಮಾಡಲು ಸಾಧ್ಯವಾಗಿಲ್ಲ. ಈಗ ಎರಡನೆಯದು ಮುಗಿಸಿ, ಮೂರನೆಯದನ್ನು ಮಾಡಿ, ಜನವರಿ ಒಳಗೆ ಅಂತಿಮ ಪರೀಕ್ಷೆ ಎಂದರೆ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ’ ಎಂದರು.

‘ಇಂತಹ ಬಿಕ್ಕಟ್ಟಿನ ಶೈಕ್ಷಣಿಕ ವೇಳಾಪಟ್ಟಿಯಲ್ಲಿರುವ ವಿದ್ಯಾರ್ಥಿಗಳಿಗೆ ಈಗ ಏಕಾಏಕಿ ಅಂತಿಮ ಪರೀಕ್ಷೆಗಳು ಪೂರ್ವಭಾವಿಯಾಗಿ ನಡೆಯುತ್ತವೆ ಎನ್ನುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳು ಮುಂದಿನ ಸಮಾಜದ ವೈದ್ಯರಾಗಿ ಸೇವೆಯಲ್ಲಿ ನಿರತರಾಗುವವರು. ಕೋವಿಡ್ ಸಂದರ್ಭದಲ್ಲಿ ವೈದ್ಯಕೀಯ ಅವಶ್ಯಕತೆಗೆ ಓಗೊಟ್ಟು ಇವರೆಲ್ಲರೂ ದುಡಿದಿದ್ದಾರೆ. ಈಗ ಇವರ ಆತಂಕಕ್ಕೆ, ಸಮಸ್ಯೆಗೆ ಸ್ಪಂದಿಸಿ ಈ ಕೂಡಲೇ ಸುತ್ತೋಲೆಯನ್ನು ವಾಪಸ್ ಪಡೆದು, ಪರೀಕ್ಷೆಗಳನ್ನು ಮುಂದೂಡಬೇಕು’ ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಮನವಿಪತ್ರ ಸಲ್ಲಿಸಲಾಯಿತು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಹಣಮಂತ ಎಸ್.ಎಚ್, ಉಪಾಧ್ಯಕ್ಷೆ ಸ್ನೇಹಾ ಕಟ್ಟಿಮನಿ, ಕಾರ್ಯದರ್ಶಿ ತುಳಜರಾಮ ಎನ್.ಕೆ., ಸದಸ್ಯರಾದ ಶಿಲ್ಪಾ ಬಿ.ಕೆ, ಪ್ರೀತಿ ದೋಡ್ಡಮನಿ, ಕರ್ಣಾ, ಭೀಮು ಆಂದೋಲಾ, ವೈದ್ಯಕೀಯ ವಿದ್ಯಾರ್ಥಿಗಳಾದ ಬಸವರಾಜ, ಸೌಮ್ಯ, ಸಂಧ್ಯಾ, ಇಮ್ರಾನ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT