ಕಲಬುರ್ಗಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಪೊರೇಟ್ ಮನೆತನಗಳ ಕೈಗೊಂಬೆಗಳಾಗಿವೆ ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ವಿ. ದಿವಾಕರ್ ಟೀಕಿಸಿದರು.
ಪಕ್ಷದ ಸಂಸ್ಥಾಪಕ ಶಿವದಾಸ್ ಘೋಷ್ ಅವರ 45ನೇ ಸ್ಮರಣ ದಿನವನ್ನು ಜಿಲ್ಲಾ ಕಚೇರಿಯಲ್ಲಿ ಧ್ವಜಾರೋಹಣ ಮಾಡುವ ಮೂಲಕ ಉದ್ಘಾಟಿಸಿದ ಅವರು, ‘ರೈತ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಯುವಜನರು ಇವರ ಸರ್ಕಾರದ ಅವಧಿಯಲ್ಲಿ ಅತಿ ಹೆಚ್ಚು ನಿರುದ್ಯೋಗಿಗಳಾಗುತ್ತಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನು ಬಂಡವಾಳಗಾರರಿಗೆ ವಹಿಸುವ ನೀತಿಯಿಂದಾಗಿ ಇಂದು ಶಿಕ್ಷಣ ಬಹಿರಂಗವಾಗಿ ಮಾರಾಟಕ್ಕೆ ಇಟ್ಟಿದ್ದಾರೆ. ಸಾಂಸ್ಕೃತಿಕ ಅಧಃಪತನದಿಂದಾಗಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದೆ ಕೀಳು ರಾಜಕೀಯದಲ್ಲಿ ತೊಡಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
’ಶಿವದಾಸ್ ಘೋಷ್ ಅವರ ಚಿಂತನೆ ಆಧಾರದ ಮೇಲೆ ಮಾರ್ಕ್ಸ್ವಾದದ ಬೆಳಕಿನಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಿ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿ ನೆರವೇರಿಸಬೇಕು’ ಎಂದರು.
ಅಧ್ಯಕ್ಷತೆಯನ್ನು ಪಕ್ಷದ ಕಲಬುರ್ಗಿ ಸ್ಥಳೀಯ ಸಮಿತಿ ಕಾರ್ಯದರ್ಶಿ ಎಸ್.ಎಂ. ಶರ್ಮಾ ವಹಿಸಿದ್ದರು. ಈರಣ್ಣಾ ಇಸಬಾ, ಗೌರಮ್ಮ ಸಿ.ಕೆ, ಡಾ ಸೀಮಾ ದೇಶಪಾಂಡೆ, ಸ್ನೇಹಾ ಕಟ್ಟಿಮನಿ, ಭೀಮು ಆಂದೋಲ, ವೆಂಕಟೇಶ, ನಾಗರಾಜ, ಅರುಣ್ ಭಾಗವಹಿಸಿದ್ದರು.