ಕಲಬುರಗಿ: ‘ರಾಜ್ಯದಲ್ಲಿ ಈಡಿಗ ಸಮುದಾಯದವರು ಎದುರಿಸುತ್ತಿರುವ ಸಮಸ್ಯೆಗಳ ಚರ್ಚೆ ಹಾಗೂ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರು ಮೇ 16 ಹಾಗೂ 17ರಂದು ಮಾತುಕತೆಗೆ ಕರೆದಿದ್ದಾರೆ. ಆ ಸಂದರ್ಭದಲ್ಲಿಯೂ ಸೂಕ್ತ ನಿರ್ಣಯ ಹೊರಬೀಳದೇ ಇದ್ದರೆ ನಮ್ಮ ಹೋರಾಟ ಮತ್ತೆ ಮುಂದುವರಿಯಲಿದೆ’ ಎಂದುಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳಿ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ತಿಳಿಸಿದರು.
‘ಈಡಿಗ ಸಮುದಾಯದ ಜನ ಏನೆಲ್ಲ ಸಮಸ್ಯೆ ಎದುರಿಸುತ್ತಿದ್ದಾರೆ, ಇದಕ್ಕೆ ಪರಿಹಾರಗಳೇನು ಎಂದು ಈಗಾಗಲೇ ಸಾಕಷ್ಟು ಬಾರಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಆದರೂ ಕಿವಿಗೊಟ್ಟು ಕೇಳಿಲ್ಲ. ಹೀಗಾಗಿ, ಹೋರಾಟ ಇನ್ನಷ್ಟು ದೊಡ್ಡ ಸ್ವರೂಪ ಪಡೆಯಲಿದೆ. ಮುಂದಿನ ದಿನಗಳಲ್ಲಿ ಮಧ್ಯ ಕರ್ನಾಟಕದಿಂದಲೂ ನಿರಂತರ ಹೋರಾಟ ನಡೆಯಲಿದೆ’ ಎಂದು ಅವರು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.
‘ಸೇಂದಿ ಮಾರಾಟಕ್ಕೆ ಅನುಮತಿ ನೀಡಬೇಕು, ಬ್ರಹ್ಮಶ್ರೀ ನಾರಾಯಣ ಗುರು ಅವರ ಹೆಸರಿನಲ್ಲಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು,ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಅಧ್ಯಯನ ಪೀಠ ಸ್ಥಾಪಿಸಬೇಕು ಎಂಬ ಬಗ್ಗೆ ರಾಜ್ಯ ಸರ್ಕಾರ ಬರುವ ಜೂನ್ 19ರೊಳಗೆ ಸಕಾರಾತ್ಮಕ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜೂನ್ 20ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು. 21ರಂದು ಕಲ್ಯಾಣ ಕರ್ನಾಟಕ ಭಾಗದ ಎಲ್ಲ ರಾಷ್ಟ್ರೀಯ ಹೆದ್ದಾರಿ ಸಂಚಾರ ನಿರ್ಬಂಧಿಸಲಾಗುವುದು. ಮೂರನೇ ಹಂತದಲ್ಲಿ ಶಿವಮೊಗ್ಗದ ಸೊರಬದಿಂದ ಸಿಂಗಲೂರು ಚೌಡೇಶ್ವರಿ ದೇವ ಸ್ಥಾನದವರೆಗೆ ಸುಮಾರು 70 ಕಿ.ಮೀ ಪಾದಯಾತ್ರೆ ಕೈಗೊಂಡು ಸರ್ಕಾರಕ್ಕೆ ಬಿಸಿ ಮುಟ್ಟಿಸುವುದಾಗಿ’ ಅವರು ಹೇಳಿದರು.
‘ಹೆಂಡದ ಮಾರಯ್ಯ ಶರಣರ ಸ್ಮಾರಕ ಸ್ಥಾಪನೆಗೂ ಚಿಂತನೆ ನಡೆದಿದೆ. ಆದರೆ ಎಲ್ಲಿ ಸ್ಥಾಪಿಸಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಂಡಿಲ್ಲ’ ಎಂದರು.
ಆರ್ಯ ಈಡಿಗ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಶ ಗುತ್ತೇದಾರ, ಪ್ರಮುಖರಾದ ಅಶೋಕ ಬಡದಾಳ, ವೆಂಕಟೇಶ ಕಡೇಚೂರ್, ವೆಂಕಟೇಶ ಗುತ್ತೇದಾರ್, ಶರಣಯ್ಯ ಗುತ್ತೇದಾರ್, ವೆಂಕಟೇಶ ಗುಂಡಾನೂರ, ಅಂಬಯ್ಯ ಗುತ್ತೇದಾರ್, ಮಹೇಶ ಗುತ್ತೇದಾರ್ ಇದ್ದರು.