ಕಲಬುರ್ಗಿ: ಜಿಲ್ಲೆಯಲ್ಲಿ ಸುಮಾರು 1200ಕ್ಕೂ ಅಧಿಕ ಟ್ಯಾಕ್ಸಿ ಚಾಲಕರಿದ್ದು, ಅವರ ಸಭೆ ಸಮಾರಂಭಗಳನ್ನು ಆಯೋಜಿಸಲು ಹಾಗೂ ಚಾಲಕರ, ಮಾಲೀಕರ ಮಕ್ಕಳ ಮದುವೆ ಸಮಾರಂಭಗಳಿಗೆ ಅನುಕೂಲವಾಗುವಂತೆ ಟ್ಯಾಕ್ಸಿ ಚಾಲಕರ ಭವನವನ್ನು ಸರ್ಕಾರ ನಿರ್ಮಿಸಿಕೊಡಬೇಕು ಎಂದು ಕರ್ನಾಟಕ ರಾಜ್ಯ ಖಾಸಗಿ ವಾಹನ ಚಾಲಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರುಕ್ಮಣ್ಣ ಎ. ರೆಡ್ಡಿ ಒತ್ತಾಯಿಸಿದರು.
ಪ್ರವಾಸೋದ್ಯಮ ದಿನದ ಅಂಗವಾಗಿ ಇತ್ತೀಚೆಗೆ ನಗರದ ಕೊಠಾರಿ ಭವನದ ಬಳಿ ಇರುವ ಟ್ಯಾಕ್ಸಿ ಸ್ಟ್ಯಾಂಡ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಸಕ ಪ್ರಿಯಾಂಕ್ ಖರ್ಗೆ ಅವರು ಪ್ರವಾಸೋದ್ಯಮ ಸಚಿವರಾಗಿದ್ದ ಸಂದರ್ಭದಲ್ಲಿ ಭವನ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಪ್ರಯತ್ನವನ್ನೂ ಆರಂಭಿಸಿದ್ದರು. ಆದರೆ, ಸರ್ಕಾರ ಬದಲಾಗಿದ್ದರಿಂದ ಭವನಕ್ಕೆ ನಿವೇಶನ ಗುರುತಿಸುವುದು ಹಾಗೂ ಕಟ್ಟಡಕ್ಕೆ ಹಣ ಬಿಡುಗಡೆ ಇನ್ನೂ ಆಗಿಲ್ಲ. ಈಗಿನ ಸರ್ಕಾರ ನಮ್ಮ ಮನವಿಯನ್ನು ಪರಿಗಣಿಸಿ ಕಲಬುರ್ಗಿ ನಗರದಲ್ಲಿ ಭವನ ಕಟ್ಟಲು ಅನುದಾನ ಮಂಜೂರು ಮಾಡಬೇಕು ಎಂದರು.
ಸಂಘದ ಉಪಾಧ್ಯಕ್ಷ ಭೀಮರಾಯ ದೊರೆ, ಕಾರ್ಯದರ್ಶಿ ವಿಠ್ಠಲ ತವಡೆ, ಅನಿಲ ದಿಕ್ಸಂಗಿ, ವೈಜನಾಥ ಹಿರೇಮಠ, ಸುನೀಲ ಸರಜೋಳಗಿ, ಬೆಂಗಳೂರಿನ ಆನಂದರಾವ್, ಅನಂತಪುರ ರಾಜಣ್ಣ, ಈಶ್ವರ, ಜಾಫರ್ ಬಳ್ಳಾರಿ, ಮೈನೊದ್ದೀನ್ ಬಳ್ಳಾರಿ ಇದ್ದರು.