ಕಲಬುರ್ಗಿ: ಸಮಾಜದಲ್ಲಿ ಬಡತನ, ಸಿರಿತನ ಶಾಶ್ವತವಲ್ಲ. ಸಾಮಾಜಿಕ ಕಾರ್ಯ ಮಾಡುವ ಮೂಲಕ ನೆರವಾಗಬೇಕು ಎಂದು ಅಫಜಲಪುರ ಸಂಸ್ಥಾನ ಹಿರೇಮಠದ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಹೇಳಿದರು.
ನಗರದ ಬಿದ್ದಾಪುರ ಕಾಲೊನಿಯಲ್ಲಿ ಶುಕ್ರವಾರ ಸಿದ್ಧಿ ವಿನಾಯಕ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ನಡೆದ ಸಿದ್ಧಿವಿನಾಯಕ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
‘ಜೀವನದಲ್ಲಿ ಹಲವು ಸಮಸ್ಯೆಗಳು ಬರುತ್ತವೆ. ಅವುಗಳನ್ನು ಎದುರಿಸಿ ನಿಲ್ಲುವ ಗುಣ ಬೆಳೆಸಿಕೊಳ್ಳಬೇಕು. ಸಮಾಜ ಸೇವೆ ಮೂಲಕ ನೊಂದವರಿಗೆ ಆಸರೆಯಾಗಬೇಕು. ಹಸಿದವರಿಗೆ ಅನ್ನ, ದಣಿದವರಿಗೆ ನೀರು ಕೊಡಬೇಕು ಎಂದರು.
ಬೀದರ್ನ ಹಾರಕೂಡದ ಹಿರೇಮಠ ಸಂಸ್ಥಾನದ ಡಾ.ಚನ್ನವೀರ ಶಿವಾಚಾರ್ಯರು ದೇವ ಸ್ಥಾನಉದ್ಘಾಟಿಸಿದರು. ಸಿದ್ಧಿ ವಿನಾಯಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿದ್ಧಣ್ಣಗೌಡ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಿವಿಲ್ ಎಂಜಿನಿಯರ್ ಮಹಾಂತೇಶ ಅಣ್ಣಿಗೇರಿ, ಉದ್ಯಮಿ ಶ್ರೀಕಾಂತ ಕಲಕೇರಿ ಇದ್ದರು.