ಕಲಬುರಗಿ: ಪೊಲೀಸರು ತಮ್ಮ ಜೀವವನ್ನೇ ಪಣಕ್ಕಿಟ್ಟು ಕಾನೂನು ಸುವ್ಯವಸ್ಥೆಯನ್ನು ನಿಭಾಯಿಸುವಲ್ಲಿ ತೊಡಗಿದ್ದಾರೆ. ಅವರ ಸೇವೆಯನ್ನು ಮರೆಯಲಾಗದು ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೆ. ಸುಬ್ರಹ್ಮಣ್ಯ ಹೇಳಿದರು.
ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಪೊಲೀಸ್ ಹುತಾತ್ಮ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
1959ರಲ್ಲಿ ಕುತಂತ್ರಿ ಚೀನಾದ ಸೈನಿಕರು ನಮ್ಮ ಗಡಿಯನ್ನು ನುಸುಳಿ ನಮ್ಮ ಪೊಲೀಸರನ್ನು ಹತ್ಯೆ ಮಾಡಿದರು. 1960ರಲ್ಲಿ ನಡೆದ ಪೊಲೀಸ್ ಮಹಾನಿರ್ದೇಶಕರ ಸಭೆಯಲ್ಲಿ ಹುತಾತ್ಮ ಪೊಲೀಸರ ಗೌರವಾರ್ಥ ಪ್ರತಿ ವರ್ಷ ಹುತಾತ್ಮ ದಿನದ ಕಾರ್ಯಕ್ರಮ ಆಯೋಜಿಸುವನಿರ್ಧಾರ ಕೈಗೊಳ್ಳಲಾಯಿತು ಎಂದರು.
ಜೈ ಜೈವಾನ್, ಜೈ ಕಿಸಾನ್ ಎಂಬ ಘೋಷವಾಕ್ಯಕ್ಕೆ ಜೈ ಪೊಲೀಸ್ ಎಂಬುದನ್ನೂ ಸೇರಿಸಬಹುದು ಎಂದು ಅಭಿಮತ ವ್ಯಕ್ತಪಡಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿಮಿ ಮರಿಯಮ್ ಜಾರ್ಜ್ ದೇಶದಾದ್ಯಂತ ಮಡಿದ ಹುತಾತ್ಮ ಪೊಲೀಸರ ಹೆಸರುಗಳನ್ನು ಓದಿದರು.
ಜಿಲ್ಲಾ ನ್ಯಾಯಾಧೀಶ ಸುಶಾಂತ ಎಂ. ಚೌಗಲೆ, ಈಶಾನ್ಯ ವಲಯ ಐಜಿಪಿ ಮನೀಷ್ ಖರ್ಬೀಕರ್, ಕಲಬುರಗಿ ಪೊಲೀಸ್ ಕಮಿಷನರ್ ಡಾ. ವೈ.ಎಸ್. ರವಿಕುಮಾರ್, ಡಿಸಿಪಿಗಳಾದ ಅಡ್ಡೂರು ಶ್ರೀನಿವಾಸಲು, ಶ್ರೀಕಾಂತ ಕಟ್ಟಿಮನಿ, ಎಸಿಪಿಗಳಾದ ಅಂಶುಕುಮಾರ್, ಜೆ.ಎಚ್.ಇನಾಮದಾರ ಇದ್ದರು.
ಹುತಾತ್ಮ ದಿನದ ನಿಮಿತ್ತ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.