ಅಫಜಲಪುರ: ತಾಲ್ಲೂಕಿನ ಘತ್ತರಗಿ ಭಾಗ್ಯವಂತಿ ದೇವಸ್ಥಾನದಲ್ಲಿ ಈಚೆಗೆ ರಾತ್ರಿ ಸಿ.ಸಿ. ಟಿವಿ ಸಂಪರ್ಕ ಕಡಿತಗೊಳಿಸಿ ಕಳ್ಳತನಕ್ಕೆ ಪ್ರಯತ್ನಿಸಿದ ಆರೋಪಿಗಳನ್ನು ಅಫಜಲಪುರ ಪೊಲೀಸ್ ಠಾಣೆಯವರು ಶನಿವಾರ ಸಂಜೆ ಬಂಧಿಸಿ ಅವರು ಕಳವು ಮಾಡಿದ್ದ 5 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಸಿಂದಗಿ ತಾಲ್ಲೂಕಿನ ನಾಗರಾಳ, ಡೋಣ ಗ್ರಾಮದ ಯಮನಪ್ಪ ಬೋರಗಿ, ದೇವರ ಹಿಪ್ಪರಗಿ ತಾಲ್ಲೂಕಿನ ಬಗಲೂರಿನ ರಮೇಶ ತಳವಾರ, ಸಿಂದಗಿ ತಾಲ್ಲೂಕಿನ ಯರಗಲ್ ಗ್ರಾಮದ ನಿವಾಸಿ ಶ್ರೀಶೈಲ ನಾಟೀಕಾರ ಎಂಬುವರನ್ನು ಬಂಧಿಸಲಾಗಿದೆ.
ನ.21ರಂದು ರಾತ್ರಿ ನಡೆದ ಸಿ.ಸಿ. ಟಿವಿ ಸಂಪರ್ಕ ಕಡಿತ ಘಟನೆ ಕುರಿತು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜಿ.ಬಿರಾದಾರ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿತ್ತು.
ಶನಿವಾರ ಪಟ್ಟಣದ ಪದವಿ ಮಹಾವಿದ್ಯಾಲಯದ ಬಳಿ 2 ಬೈಕ್ಗಳಲ್ಲಿ ಮೂವರು ಅನುಮಾನಾಸ್ಪವಾಗಿ ಹೊರಟಿದ್ದ ವೇಳೆ ತಡೆದು ವಿಚಾರಣೆ ನಡೆಸಿದಾಗ ಈ ಮೊದಲು ತಾವು 5 ಬೈಕ್ಗಳನ್ನು ಕಳವು ಮಾಡಿದ್ದಾಗಿ ಒಪ್ಪಿಕೊಂಡರು. ಅಲ್ಲದೆ ದೇವಸ್ಥಾನದ ಹುಂಡಿ ಕಳುವಿಗೆ ಯತ್ನಿಸಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ನಿರ್ದೇಶನದ ಮೇಲೆ ಸಿಪಿಐ ಮಹಾದೇವ ಪಂಚಮುಖಿ, ಪಿಎಸ್ಐ ವಿಶ್ವನಾಥ ಮುದರೆಡ್ಡಿ, ಅಪರಾಧ ವಿಭಾಗದ ಪಿಎಸ್ಐ ಅಶೋಕ ಪಾಟೀಲ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.