ಈ ಕುರಿತು ಹೇಳಿಕೆ ನೀಡಿರುವ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಹಣಮಂತ ಎಸ್.ಎಚ್, ಕಾರ್ಯದರ್ಶಿ ಈರಣ್ಣ ಇಸಬಾ, ‘ಈಗಾಗಲೇ ಇರುವ ಪಠ್ಯದಲ್ಲಿ ಟಿಪ್ಪು ಸುಲ್ತಾನನನ್ನು ಬಿಂಬಿಸಿರುವ ರೀತಿಯಲ್ಲಿ ಯಾವುದೇ ಅತಿರೇಕಗಳಿಲ್ಲ. ಆತನನ್ನು ಸ್ವಾತಂತ್ರ್ಯ ಹೋರಾಟಗಾರನಾಗಿ ಚಿತ್ರಿಸಿಲ್ಲ. ಬ್ರಿಟಿಷರ ವಿರುದ್ಧ ತನ್ನ ರಾಜ್ಯವನ್ನು ಘನತೆಯನ್ನು ಉಳಿಸಿಕೊಳ್ಳಲು ರಾಜಿರಹಿತವಾಗಿ ಹೋರಾಡಿದ್ದನ್ನೇ ಪಠ್ಯದಲ್ಲಿ ಬರೆಯಲಾಗಿದೆ. ಬ್ರಿಟಿಷರ ಅಟ್ಟಹಾಸಕ್ಕೆ ಸೆಡ್ಡು ಹೊಡೆದು ಮಕ್ಕಳನ್ನೂ ಪಣಕ್ಕಿಟ್ಟು ಹೋರಾಟ ಮಾಡಿದ್ದನ್ನು ವಿದ್ಯಾರ್ಥಿಗಳು ಇತಿಹಾಸದ ಭಾಗವಾಗಿ ಓದುವುದು ಮುಖ್ಯ. ಮಕ್ಕಳಿಗೆ ನೈಜ ಇತಿಹಾಸ ಹಾಗೂ ಭಾರತದ ಹೋರಾಟದ ಪರಂಪರೆಯ ಪಾಠ ಕಲಿಸಬೇಕು. ಅಲ್ಲದೆ, ಪಠ್ಯದಲ್ಲಿ ಯಾವುದು ಇರಬೇಕು, ಯಾವುದು ಇರಬಾರದು ಎಂಬುದನ್ನು ಶಿಕ್ಷಣ ತಜ್ಞರು, ಇತಿಹಾಸ ತಜ್ಞರು ಚರ್ಚಿಸಿ ತೀರ್ಮಾನಿಸತಕ್ಕದ್ದು. ಏಕಾಯೇಕಿಯಾಗಿ ಒಬ್ಬ ಶಾಸಕನ ದೂರಿಗೆ ಶಾಲಾ ಪಠ್ಯವನ್ನೇ ಬದಲಿಸಲು ಹೊರಟಿರುವುದು ಅತಿರೇಕ. ಅಲ್ಲದೇ ಟಿಪ್ಪು ಮುಸಲ್ಮಾನ ಎಂಬ ಕಾರಣಕ್ಕಾಗಿ ಆತನ ಚರಿತ್ರೆಯನ್ನು ಇತಿಹಾಸದ ಪಠ್ಯಪುಸ್ತಕ ದಿಂದ ಕಿತ್ತುಹಾಕಲು ಹೊರಟಿರುವುದು ಬಿಜೆಪಿಯ ಕೋಮುವಾದಿ ನಿಲುವನ್ನು ಎತ್ತಿತೋರಿಸುತ್ತದೆ’ ಎಂದು ಟೀಕಿಸಿದ್ದಾರೆ.