ಕಲಬುರ್ಗಿ: ಜಿಲ್ಲೆಯ ರೈತರಿಂದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ತೊಗರಿ ಕಾಳು ಖರೀದಿಸಲು ಜ.14ರ ವರೆಗೆ ಹೆಸರು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯ ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ರಿತೇಂದ್ರನಾಥ ಸೂಗೂರ ತಿಳಿಸಿದ್ದಾರೆ.
ಈ ಮೊದಲು ನೋಂದಣಿಗೆ ಜ. 7 ಕೊನೆಯ ದಿನವಾಗಿತ್ತು. ಸರ್ಕಾರದ ಹೊಸ ಆದೇಶದಂತೆ ಅವಧಿಯನ್ನು ವಿಸ್ತರಿಸಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಭೂಮಿ, ಆಧಾರ್ ಮತ್ತು ಬೆಳೆ ದರ್ಶಕ ದತ್ತಾಂಶದಲ್ಲಿ ತಾಳೆ ಮಾಡಿದ ಬಳಿಕ ರೈತರ ನೋಂದಣಿ ಮಾಡಲಾಗುತ್ತದೆ. ಒಂದು ವೇಳೆ ದತ್ತಾಂಶದಲ್ಲಿ ತೊಗರಿ ಉತ್ಪನ್ನ ಬೆಳೆಯದೇ ಇರುವುದು ಕಂಡು ಬಂದಲ್ಲಿ ಸಂಬಂಧಪಟ್ಟ ತಹಶೀಲ್ದಾರರು ಪರಿಶೀಲಿಸಿ, ದೃಢೀಕರಿಸಿದಲ್ಲಿ ಅಂತಹ ರೈತರನ್ನು ನೋಂದಾಯಿಸಲಾಗುತ್ತದೆ.
ತೊಗರಿ ಬೆಳೆದ ರೈತರ ಪಹಣಿ ಮತ್ತು ಆಧಾರ್ ದಾಖಲೆಗಳಲ್ಲಿ ಒಂದೇ ತರಹದ ಹೆಸರು ಇರಬೇಕು ಮತ್ತು ಆಧಾರ್ ಸಂಖ್ಯೆ ಜೋಡಣೆಯಾದ ಬ್ಯಾಂಕ್ ಖಾತೆ ಹೊಂದಿರಬೇಕು ಎಂದು ತಿಳಿಸಿದ್ದಾರೆ.