ಕಲಬುರ್ಗಿ: ‘ಹೊಟ್ಟೆ ಕಿಚ್ಚಿಗೆ ಮದ್ದಿಲ್ಲ’ ಎಂಬ ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಡಾ.ಉಮೇಶ ಜಾಧವ, ‘ಹೊಟ್ಟೆ ಕಿಚ್ಚು ಎಂಬ ಶಬ್ದ ನನ್ನ ಡಿಕ್ಷನರಿಯಲ್ಲೇ ಇಲ್ಲ’ ಎಂದು ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ರೀತಿ ಹೇಳುವ ಮೂಲಕ ಖರ್ಗೆ ಅವರು ಪುತ್ರನ ರಕ್ಷಣೆಗೆ ಮುಂದಾಗಿದ್ದಾರೆ. ತಮ್ಮ ಪುತ್ರನ ಹಾಗೆ ನನ್ನ ಹಾಗೂ ಡಾ.ಅಜಯಸಿಂಗ್ ಅವರನ್ನು ರಕ್ಷಣೆ ಮಾಡಲಿ ಎಂಬುದಷ್ಟೇ ನಮ್ಮ ಮನವಿಯಾಗಿತ್ತು’ ಎಂದರು.
‘ಖರ್ಗೆ ಹೇಳಿದವರು ಸಚಿವರು, ವಿಧಾನ ಪರಿಷತ್ ಸದಸ್ಯರು, ರಾಜ್ಯ ಸಭೆ ಸದಸ್ಯರು ಆಗುತ್ತಾರೆ. ಆದರೆ, ಎಂ.ವೈ.ಪಾಟೀಲ, ಅಜಯಸಿಂಗ್ ಏಕೆ ಸಚಿವರಾಗಲಿಲ್ಲ, ಇದರ ಅರ್ಥ ಏನು’ ಎಂದು ಪ್ರಶ್ನಿಸಿದರು.
‘ಚಿಂಚೋಳಿ ಮತ ಕ್ಷೇತ್ರದಲ್ಲಿ ಅನೇಕರು ದೈಹಿಕವಾಗಿ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಆದರೆ, ಮಾನಸಿಕವಾಗಿ ನನ್ನ ಜತೆ ಇದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.