ಯಾದಗಿರಿ: ಗುರುವಾರ ಬೀಸಿದ ಬಿರುಗಾಳಿಗೆ ಸಮೀಪದ ಬಲಕಲ್, ನಾಲ್ವಡಿಗಿ, ಚಟ್ನಳ್ಳಿ ಗ್ರಾಮಗಳಲ್ಲಿನ ಗುಡಿಸಲುಗಳು, ಶೆಡ್ಗಳ ಪತ್ರಾಸ್ಗಳು ಹಾರಿ ಹೋಗಿವೆ. ಇದರಿಂದ ಆಶ್ರಯ ಕಳೆದುಕೊಂಡ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಬಲಕಲ್ ಗ್ರಾಮದ ಸಿದ್ದಣ ಅಗಸಿಮನಿ ಎಂಬುವರಿಗೆ ಸೇರಿದ ಕುರಿಗಳ ಫಾರ್ಮ್ ಹೌಸ್ನ ಪತ್ರಾಸ್ಗಳು ಸಂಪೂರ್ಣ ಗಾಳಿಗೆ ಹಾರಿಹೋಗಿವೆ. ಫಾರ್ಮ್ ಹೌಸ್ ಸಂಪೂರ್ಣ ನೆಲ ಕಚ್ಚಿದೆ. ಫಾರ್ಮ್ ಹೌಸ್ನಲ್ಲಿರುವ 25ಕುರಿಗಳು ಪ್ರಾಣಪಾಯದಿಂದ ಪಾರಾಗಿವೆ. ಸಂಗ್ರಹಿಸಿದ್ದ ಮೇವು, ಇತರೆ ವಸ್ತುಗಳು ಸೇರಿ ಸುಮಾರು ₹70 ಸಾವಿರದಷ್ಟು ಅಂದಾಜು ಹಾನಿಯಾಗಿದೆ ಎಂದು ಬಲಕಲ್ ಗ್ರಾಮದ ನಿವಾಸಿ ಸಿದ್ದಣ ತಿಳಿಸಿದ್ದಾರೆ.
ಬಿರುಗಾಳಿಗೆ ವಿದ್ಯುತ್ ಕೈ ಕೊಟ್ಟಿದ್ದರಿಂದ ಗ್ರಾಮಸ್ಥರು ಕತ್ತಲಲ್ಲಿ ಕಾಲ ಕಳೆದರು. ಈಗ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಜೆಸ್ಕಾಂ ಶುಕ್ರವಾರ ಮಧ್ಯಾಹ್ನ ವಿದ್ಯುತ್ ಸಂಪರ್ಕ ಕಲ್ಪಿಸಿದೆ ಎಂದು ಗ್ರಾಮಸ್ಥರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.