ವಾಡಿ: ದೆಹಲಿ ನಿಜಾಮುದ್ದೀನ್ನಿಂದ ನೇರವಾಗಿ ಪಟ್ಟಣಕ್ಕೆ ಬಂದು ಇಲ್ಲಿಯೇ 10 ದಿನ ನೆಲೆಸಿದ್ದ ತೆಲಂಗಾಣ ಮೂಲದ ಕೋವಿಡ್ 19 ಸೋಂಕಿತ ವ್ಯಕ್ತಿಯೊಬ್ಬನ ಸಂಪರ್ಕದಲ್ಲಿದ್ದ ನಾಲ್ಕೂ ಜನರ ವರದಿ ನೆಗೆಟಿವ್ ಬಂದಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಸುರೇಶ ಮೇಕಿನ್ ತಿಳಿಸಿದ್ದಾರೆ.
ಇದರಿಂದ ಪಟ್ಟಣ ಹಾಗೂ ರಾವೂರು ಗ್ರಾಮಸ್ಥರ ಆತಂಕ ದೂರವಾಗಿದೆ. ಪಟ್ಟಣದ ಎಸಿಸಿ ಟಿಆರ್ಟಿಯಲ್ಲಿ 10 ದಿನಗಳ ಕಾಲ ನೆಂಟರ ಮನೆಯಲ್ಲಿ ತಂಗಿದ್ದ ತೆಲಂಗಾಣದ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಬರುತ್ತಿದ್ದಂತೆ ಪಟ್ಟಣದ ಜನರು ಆತಂಕದಲ್ಲಿ ಮುಳುಗಿದ್ದರು.
ವ್ಯಕ್ತಿಯನ್ನು ತನ್ನ ಕಾರಿನಲ್ಲಿ ತಾಂಡೂರುವರೆಗೂ ಕರೆದುಕೊಂಡು ಹೋಗಿದ್ದ ರಾವೂರು ಗ್ರಾಮದ ಚಾಲಕ ಸೇರಿದಂತೆ ಒಟ್ಟು 4 ಜನರನ್ನು ಕಲಬುರ್ಗಿ ಇಎಸ್ಐ ಆಸ್ಪತ್ರೆಗೆ ಭಾನುವಾರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕರೆದುಕೊಂಡು ಹೋಗಲಾಗಿತ್ತು.