ವಿವಿಧ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಉತ್ತಮ ಪ್ರದರ್ಶನ ತೋರಿಸಿದವರು ಟ್ರೋಫಿ, ಪ್ರಶಸ್ತಿ ಪತ್ರ ಹಿಡಿದು ಬೀಗಿದರೆ, ಸೋತವರು ನಿರಾಸೆಯ ಮುಖ ಹೊತ್ತು ಊರಿನತ್ತ ಹೆಜ್ಜೆ ಹಾಕಿದರು. ಗೆದ್ದೇ ಗೆಲ್ಲುತ್ತೇವೆ ಎಂದು ಬಂದವರಿಗೆ ಪ್ರಶಸ್ತಿ ಸಿಗದೇ ಇರುವುದಕ್ಕೆ ಬೇಸರವಾಯಿತು. ಇದು ಅಳುವಿನ ಮೂಲಕವೂ ಸ್ಫೋಟವಾಯಿತು. ಉತ್ತಮ ಪ್ರತಿಭೆ ಇದ್ದರೂ ಪ್ರಶಸ್ತಿ ಸಿಗಲಿಲ್ಲ. ನಾವೇ ಗೆಲ್ಲುತ್ತೇವೆ ಎಂದು ಹೇಳಿದ್ದರು. ಆದರೆ, ಫಲಿತಾಂಶ ಬಂದಾಗ ಬೇರೆಯೇ ಆಗಿತ್ತು ಎಂದು ನಗರದ ಶರಣಬಸವೇಶ್ವರ ಕಾಲೇಜಿನ ವಿದ್ಯಾರ್ಥಿ ಭೀಮರಾವ್ ಹೇಳಿದರು. ಕೆಲಹೊತ್ತು ಸಮಾರೋಪ ಸಮಾರಂಭ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದ ಎದುರು ಕಣ್ಣೀರಿಡುತ್ತಲೇ ಭೀಮರಾವ್ ಹಾಗೂ ಕೆಲ ವಿದ್ಯಾರ್ಥಿಗಳು ಪ್ರತಿಭಟನೆಯನ್ನೂ ಮಾಡಿದರು.