ಕಲಬುರಗಿ: ಮಹಿಳೆಯೊಬ್ಬರು ಗ್ರಾಮದಲ್ಲಿ ಕುಡಿಯುವ ನೀರು ಸಮಸ್ಯೆಯನ್ನು ಶಾಸಕರಿಗೆ ತಿಳಿಸುತ್ತಿದ್ದ ದೃಶ್ಯ ಸೆರೆ ಹಿಡಿಯುತ್ತಿದ್ದವರ ಮೊಬೈಲ್ ಎಸೆದು ಶಾಸಕ ಬಸವರಾಜ ಮತ್ತಿಮಡು ಅವರು ಹಲ್ಲೆ ಮಾಡಿದ್ದಾರೆ ಎನ್ನಲಾದ ವಿಡಿಯೊ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ನರೋಣಾ ಗ್ರಾಮಕ್ಕೆ ಪೊಲೀಸ್ ಠಾಣೆಯ ಕಟ್ಟಡದ ಭೂಮಿಪೂಜೆ ಕಾರ್ಯಕ್ರಮಕ್ಕಾಗಿ ಬಂದಿದ್ದರು.
ಈ ವೇಳೆ ಗ್ರಾಮದ ಮಹಿಳೆಯರು ಕುಡಿಯುವ ನೀರು ಪೂರೈಸಲು ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಮಾಡಿದ್ದರೂ ಕ್ರಮಕ್ಕೆ ಮುಂದಾಗಿಲ್ಲ. ಸರಿಯಾದ ಚರಂಡಿಯೂ ಇಲ್ಲ ಎಂದು ಶಾಸಕರನ್ನು ತರಾಟೆಗೆ ತೆಗೆದುಕೊಂಡರು ಎಂದು ಗ್ರಾಮಸ್ಥರೊಬ್ಬರು ಹೇಳಿದರು.
ಶಾಸಕರನ್ನು ತರಾಟೆಗೆ ತೆಗೆದು ಕೊಳ್ಳುತ್ತಿದ್ದನ್ನು ವ್ಯಕ್ತಿಯೊಬ್ಬರು ಮೊಬೈಲ್ನಲ್ಲಿ ಸೆರೆ ಹಿಡಿಯುತ್ತಿದ್ದರು. ಕೋಪದಿಂದ ಶಾಸಕರು ವಿಡಿಯೊ ಮಾಡದಂತೆ ಹೊಡೆದಿದ್ದಾರೆ ಎನ್ನಲಾದ ದೃಶ್ಯ ಹರಿದಾಡುತ್ತಿದೆ.
‘ಹಲ್ಲೆ ಮಾಡಿಲ್ಲ’: ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ಮತ್ತಿಮಡು, ‘ಸಮಸ್ಯೆ ಆಲಿಸಲೆಂದೇ ಹೋಗಿದ್ದು, ಯಾರ ಮೇಲೂ ಹಲ್ಲೆ ಮಾಡಿಲ್ಲ. ಕೈ ತಗುಲಿ ಮೊಬೈಲ್ ಕೆಳಗೆ ಬಿದ್ದಿರಬಹುದು. ಚುನಾವಣೆ ವೇಳೆ ಸುಳ್ಳು ಆರೋಪ ಸಾಮಾನ್ಯ’ ಎಂದರು.