ಕಲಬುರಗಿ: ‘ಕಲಾನೈಪುಣ್ಯದೊಂದಿಗೆ ಪಂಚ ಕಸುಬುಗಳನ್ನು ಪ್ರಾರಂಭಿಸಿದ್ದ ವಿಶ್ವಕರ್ಮರು ಜನಸಾಮಾನ್ಯರ ನಿತ್ಯದ ಬದುಕಿಗೆ ಬೇಕಾದಂತಹ ಕಬ್ಬಿಣ, ತಾಮ್ರ, ಬೆಳ್ಳಿ, ಬಂಗಾರದಿಂದ ವಸ್ತುಗಳನ್ನು ತಯಾರಿಸಿ ಸಮಾಜಕ್ಕೆ ತಮ್ಮದೆಯಾದ ಕೂಡುಗೆಗಳನ್ನು ನೀಡುತ್ತಿದ್ದಾರೆ’ ಎಂದು ಶಹಾಬಾದ್ ಮರಗೊಳ ಪದವಿ ಕಾಲೇಜಿನ ನಿವೃತ್ತ ಪ್ರಚಾರ್ಯ ಗುರುಮೂರ್ತಿ ಆರ್.ಬಡಿಗೇರ ಹೇಳಿದರು.
ಇಲ್ಲಿನ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿ ಹಾಗೂ ವಿಶ್ವಕರ್ಮ ಜಯಂತ್ಯುತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಮಾಜಕ್ಕೆ ವಿಶ್ವಕರ್ಮ ಕಾಯಕ ಬಹು ಅಗತ್ಯವಾಗಿದೆ. ವಿಶ್ವಕರ್ಮ ಸಮುದಾಯದವರು ಸಂಘಟಿತರಾಗಿ ರಾಜಕೀಯ ಹಾಗೂ ಶೈಕ್ಷಣಿಕವಾಗಿ ಮುಂದೆ ಬರಬೇಕಿದೆ. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.
ಏಕದಂಡಿಗಿ ಮಠದ ದೊಡ್ಡೇಂದ್ರ ಸ್ವಾಮೀಜಿ ಮಾತನಾಡಿ, ‘12 ಶತಮಾನದಲ್ಲಿ ವಿಶ್ವಕರ್ಮ ಸಮಾಜದ ಬಡಿಗೇರ ಮನೆಗಳಲ್ಲಿ ಅನುಭವ ಮಂಟಪಗಳು ಇರುತ್ತಿದ್ದವು. ಸರ್ಕಾರದಿಂದ ಸಿಗುವ ಯೋಜನೆಗಳ ಲಾಭ ಪಡೆಯಬೇಕು. ವಿಶ್ವಕರ್ಮ ಸಮಾಜಕ್ಕಾಗಿ ಕೆಲವು ಮುಖಂಡರು ಸಾಕಷ್ಟು ಹಣ ಖರ್ಚು ಮಾಡಿದ್ದಾರೆ’ ಎಂದರು.
ಪ್ರಣವ ನಿರಂಜನ್ ಸ್ವಾಮೀಜಿ, ವೀರಣ್ಣ ಮುತ್ಯಾ, ಮೌನೇಶ್ವರ ದೇವಸ್ಥಾನದ ಅರ್ಜಕ ಶಿವರಾಜ ಶಾಸ್ತ್ರಿ, ವಿಶ್ವಕರ್ಮ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ವೀರೇಶ ಬಡಿಗೇರ ಅವರು ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜ್ಯ ಸಲ್ಲಿಸಿ, ಪುಷ್ಪಾರ್ಚನೆ ಮಾಡಿದರು.
ಕನ್ನಡ ಮತ್ತು ಸಾಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ದತ್ತಪ್ಪ ಸಾಗನೂರ ಇದ್ದರು. ಸಮಾಜದ ಮುಖಂಡರನ್ನು ಸನ್ಮಾನಿಸಲಾಯಿತು. ಮಕ್ಕಳು ಭರತ ನಾಟ್ಯ ಪ್ರದರ್ಶಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.