ಕಲಬುರ್ಗಿ: ‘ನಮ್ಮ ಸಂವಿಧಾನವು ಪುರುಷರು ಮತ್ತು ಮಹಿಳೆಯರು ಇಬ್ಬರಿಗೂ ಸಮಾನತೆ ಕಲ್ಪಿಸಿದ್ದರೂ ವಾಸ್ತವವಾಗಿ ಅದು ಕಾರ್ಯಗತಗೊಳ್ಳುತ್ತಿಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಭರತೇಶ್ ವಿಷಾದಿಸಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸ್ಥಳೀಯಸ್ನಾತಕೋತ್ತರ ಕೇಂದ್ರದಲ್ಲಿ ‘ಮಹಿಳಾ ಹಕ್ಕುಗಳು ಮತ್ತು ಮಹಿಳೆಯರಿಗೆ ಸಂಬಂಧಿಸಿದ ಕಾನೂನುಗಳು’ ಕುರಿತು ಬುಧವಾರ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
‘ಮಹಿಳೆಯರ ಸಮಾನತೆ ಹಾಗೂ ಹಕ್ಕುಗಳನ್ನು ರಕ್ಷಿಸಲು ಸಾಕಷ್ಟು ಕಾನೂನುಗಳಿವೆ. ಆದರೆ, ಅವುಗಳ ಕುರಿತು ಮಾಹಿತಿ ಕೊರತೆಯಿಂದ ಹಕ್ಕುಗಳ ರಕ್ಷಣೆಯಾಗುತ್ತಿಲ್ಲ. ಗುಜ್ಜರ್ಕಿ ಶಾದಿ, ಬಾಲ್ಯವಿವಾಹದಂತಹ ಅನಿಷ್ಠಗಳು ಇನ್ನೂ ನಿವಾರಣೆಯಾಗಿಲ್ಲ’ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಟಿಯುಪ್ರಾದೇಶಿಕ ಕೇಂದ್ರದ ನಿರ್ದೇಶಕ ಪ್ರೊ.ಬಸವರಾಜ ಗಾದ್ಗೆ, ಮಹಿಳಾ ಹಕ್ಕುಗಳ ಅರಿವನ್ನು ಕೆಳಸ್ತರದ ಜನರಿಗೆ ತಲುಪಿಸಬೇಕು ಎಂದರು.ಮಹಿಳಾ ಸಬಲೀಕರಣ ಘಟಕದ ಮುಖ್ಯಸ್ಥೆ ಡಾ.ಶುಭಾಂಗಿ ಡಿ.ಸಿ., ಬೊಧಕರು, ವಿದ್ಯಾರ್ಥಿಗಳು ಇದ್ದರು.