ಚಿಂಚೋಳಿ: ವನ್ಯಜೀವಿಧಾಮದ ಸಿಬ್ಬಂದಿ ಅಂದಾಜು 4 ರಿಂದ 5 ವರ್ಷ ವಯಸ್ಸಿನ ಚಿಪ್ಪುಹಂದಿಯನ್ನು ಸಿಮೆಂಟ್ ಚೀಲದಲ್ಲಿ ಹಿಡಿದುಕೊಂಡು ಮನೆಗೆ ಹೋಗುತ್ತಿದ್ದ ವ್ಯಕ್ತಿಯಿಂದ ವಶಪಡಿಸಿಕೊಂಡ ಘಟನೆ ಇಲ್ಲಿನ ಕುಂಚಾವರಂ ಕಾಡಿನಲ್ಲಿ ಭಾನುವಾರ ನಡೆದಿದೆ.
ಶೇಖರ ಗಂಗಣ್ಣ ಗೊಲ್ಲ ಎಂಬಾತ ಕಾಡಿನಿಂದ ಚಿಪ್ಪುಹಂದಿಯನ್ನು ಚೀಲದಲ್ಲಿ ತುಂಬಿಕೊಂಡು ಹೊತ್ತು ತರುವಾಗ ಗಸ್ತು ತಿರುಗುತ್ತಿದ್ದ ಸಿಬ್ಬಂದಿ ಎದುರಿಗೆ ಬಂದಿದ್ದಾರೆ. ಆಗ ಶೇಖರ ಚೀಲವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಹೋಗಿ ನೋಡಿದಾಗ ಚೀಲದಲ್ಲಿ ಚಿಪ್ಪುಹಂದಿ ಪತ್ತೆಯಾಗಿದೆ. ನಂತರ ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ ಅವರು ಜಿಲ್ಲಾ ಅರಣ್ಯ ಸಂರಕ್ಷಾಧಿಕಾರಿ ವಾನತಿ ಅವರ ಗಮನಕ್ಕೆ ತಂದು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.
ಆರೋಪಿಗಾಗಿ ಶೋಧ ಮುಂದುವರಿದಿದೆ. ಚಿಪ್ಪು ಹಂದಿ ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳ ಸಾಲಿಗೆ ಸೇರಿದೆ. 2 ವರ್ಷಗಳ ಹಿಂದೆ ಇಲ್ಲಿನ ಚಾಪ್ಲಾ ನಾಯಕ ತಾಂಡಾದ ಒಬ್ಬರನ್ನು ಚಿಪ್ಪುಹಂದಿ ಸಾಗಣೆ ಆರೋಪದಲ್ಲಿ ತೆಲಂಗಾಣದ ಅರಣ್ಯ ಅಧಿಕಾರಿಗಳು ಬಂಧಿಸಿದ್ದರು.
ವನ್ಯಜೀವಿ ಧಾಮದಲ್ಲಿ ಕಾಡು ಹಂದಿ, ಮುಳ್ಳುಹಂದಿಗಳನ್ನು ಜನರು ಕಂಡಿದ್ದಾರೆ.ಆದರೆ ವಿರಳವಾದ ಚಿಪ್ಪು ಹಂದಿ ಕಂಡಿರಲಿಲ್ಲ. ಈಗ ಧಾಮದಲ್ಲಿ ಚಿಪ್ಪು ಹಂದಿ ಇರುವುದು ಈ ಪ್ರಕರಣದಿಂದ ಖಾತ್ರಿಯಾಗಿದೆ.