ಕಲಬುರ್ಗಿ: ಅಂಗಳದಲ್ಲಿ ಆಟವಾಡುತ್ತಿದ್ದ ಮಕ್ಕಳನ್ನು ಕರೆದು ಅವರ ಮೇಲೆ ಕಾಯಿಸಿದ ಅಡುಗೆ ಎಣ್ಣೆ ಎರಚಿ ಗಾಯಗೊಳಿಸಿದ್ದ ಇಲ್ಲಿಯ ಆನಂದ ನಗರ ಬಡಾವಣೆಯ ನಿವಾಸಿ ಶ್ರೀದೇವಿ ಸಂಪತರಾವ್ ಕೋರವಾರ ಎಂಬ ಮಹಿಳೆಗೆ ಇಲ್ಲಿಯ ನ್ಯಾಯಾಲಯ 5 ವರ್ಷ ಸಾಧಾರಣ ಜೈಲು ಶಿಕ್ಷೆ ಹಾಗೂ ₹2 ಲಕ್ಷ ದಂಡ ವಿಧಿಸಿದೆ.
25.3.2019ರಂದು ಬೆಳಿಗ್ಗೆ 11.15ರ ಸುಮಾರು ಮನೆಯ ಮುಂದೆ ಆಟವಾಡುತ್ತಿದ್ದ ಇಬ್ಬರು ಬಾಲಕಿಯರನ್ನು ಚಾಕಲೇಟ್ ಕೊಡುತ್ತೇನೆ ಬನ್ನಿ ಎಂದು ಕರೆದು ಅವರ ಕಣ್ಣು ಮುಚ್ಚಿಸಿ ಅವರಿಬ್ಬರ ಮೇಲೆ ಕಾಯಿಸಿದ ಅಡುಗೆ ಎಣ್ಣೆ ಎರಚಿದ್ದಳು ಎಂದು ದೂರು ದಾಖಲಾಗಿತ್ತು.
ಮೂರು ವರ್ಷದ ಬಾಲಕಿಗೆ ಹಣೆ, ತಲೆ, ಕಾಲು, ಕೈಗಳು ಹಾಗೂ ಭುಜಕ್ಕೆ ಸುಟ್ಟ ಗಾಯಗಳಾಗಿದ್ದವು. 10 ವರ್ಷದ ಬಾಲಕಿಗೆ ಮುಖ, ಎರಡೂ ಕೈ, ಬೆರಳು, ಕಾಲು, ತೊಡೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು.
ನೆರೆಮನೆಯವರೊಂದಿಗೆ ತಕರಾತು ಮಾಡಿಕೊಂಡಿದ್ದನ್ನು ಮನಸ್ಸಿನಲ್ಲಿಟ್ಟುಕೊಂಡು ಹಾಗೂ ಆ ಕುಟುಂಬದವರು ಚೆನ್ನಾಗಿರುವುದನ್ನು ಸಹಿಸದೇ ಆಕೆ ಈ ಕೃತ್ಯವೆಸಗಿದ್ದಳು ಎಂದು ಇಲ್ಲಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆಗಿನ ಪಿಎಸ್ಐ ಎ.ರಾಮಚಂದ್ರ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಶುಕ್ಲಾಕ್ಷ ಪಾಲನ್ ಅವರು, ಶ್ರೀದೇವಿಗೆ ಶಿಕ್ಷೆ ವಿಧಿಸಿ ಈಚೆಗೆ ತೀರ್ಪು ನೀಡಿದ್ದಾರೆ. ₹2 ಲಕ್ಷ ದಂಡ ಭರಿಸದಿದ್ದರೆ ಹೆಚ್ಚುವರಿಯಾಗಿ ಒಂದು ವರ್ಷ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ. ದಂಡದ ಹಣದಲ್ಲಿ ₹1.50 ಲಕ್ಷವನ್ನು ನೊಂದ ಬಾಲಕಿಯರಿಗೆ ಸಮನಾಗಿ ನೀಡಲು ಮತ್ತು ಈ ಹಣವನ್ನು ಅವರು ವಯಸ್ಕರಾಗುವವರೆಗೆ ಬ್ಯಾಂಕಿನಲ್ಲಿ ಠೇವಣಿ ಇಡಲು ಆದೇಶಿಸಿದ್ದಾರೆ.
ನೊಂದ ಬಾಲಕಿಯ ಪಾಲಕರು ಈಗಾಬಲೇ ಚಿಕಿತ್ಸೆಗಾಗಿ ₹18ರಿಂದ ₹20 ಲಕ್ಷ ಖರ್ಚು ಮಾಡಿದ್ದಾರೆ. ಈ ವೆಚ್ಚದ ದಾಖಲೆಗಳನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಅವರಿಗೆ ಹಾಜರುಪಡಿಸಿದಾಗ ಕಲಂ 357 (ಎ) ದಂಡ ಪ್ರಕ್ರಿಯಾ ಸಂಹಿತೆ ಪ್ರಕಾರ ವಿಚಾರಣೆ ಮಾಡಿ ಸೂಕ್ತ ಪರಿಹಾರ ಪಡೆಯಲು ಅವರು ಸೂಚಿಸಿದ್ದಾರೆ.
ಸರ್ಕಾರದ ಪರವಾಗಿ 1ನೇ ಹೆಚ್ಚುವರಿ ಸರ್ಕಾರಿ ವಕೀಲ ಎಸ್.ಆರ್. ನರಸಿಂಹಲು ವಾದ ಮಂಡಿಸಿದ್ದರು.