ಕಲಬುರ್ಗಿ: ತಾಲ್ಲೂಕಿನ ಸಿಂದಗಿ ಗ್ರಾಮದ ಹೊರವಲಯದಲ್ಲಿ ಮಾರಕಾಸ್ತ್ರಗಳಿಂದ ಇರಿದು, ನಂತರ ತಲೆ ಮೇಲೆ ಕಲ್ಲು ಎತ್ತಿಹಾಕಿ ವೀರೇಶ ಭೀಮಳ್ಳಿ (28) ಎಂಬಾತನನ್ನು ದುಷ್ಕರ್ಮಿಗಳು ಬುಧವಾರ ಕೊಲೆ ಮಾಡಿದ್ದು, ಗುರುವಾರ ಸಂಜೆ ಶವ ಪತ್ತೆಯಾಗಿದೆ.
ನಗರದ ದುಬೈ ಕಾಲೊನಿ ನಿವಾಸಿ ವೀರೇಶ ನಗರದ ಸೂಪರ್ ಮಾರ್ಕೆಟ್ನಲ್ಲಿ ಬಾಂಡೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಬುಧವಾರ ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದ ವೀರೇಶನನ್ನು ಪುಸಲಾಯಿಸಿ ಮೂವರು ಕರೆದುಕೊಂಡು ಹೋಗಿದ್ದರು. ಮಧ್ಯಾಹ್ನದಿಂದ ನಾಪತ್ತೆಯಾಗಿದ್ದರಿಂದ ಗಾಬರಿಯಾದ ಪೋಷಕರು ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಗ್ರಾಮದ ಹೊರವಲಯದ ನಿರ್ಜನ ಪ್ರದೇಶದಲ್ಲಿ ಶವವನ್ನು ಹಾಕಲಾಗಿತ್ತು. ಹಳೆ ವೈಷಮ್ಯದಿಂದಾಗಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಡಿಸಿಪಿ (ಕಾನೂನು ಮತ್ತು ಸುವ್ಯವ್ಥೆ) ಡಿ. ಕಿಶೋರಬಾಬು, ಡಿಸಿಪಿ (ಅಪರಾಧ ಮತ್ತು ಸಂಚಾರ) ಶ್ರೀಕಾಂತ ಕಟ್ಟಿಮನಿ, ಎಸಿಪಿ ಜೆ.ಎಚ್. ಇನಾಮದಾರ, ಚೌಕ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಎಸ್.ಆರ್. ನಾಯಕ್ ಭೇಟಿ ನೀಡಿ ಪರಿಶೀಲಿಸಿದರು.