ಕಲಬುರ್ಗಿ: ‘ಇಂದಿನ ಯುವಕರು ಪಾಶ್ಚಿಮಾತ್ಯದ ಪ್ರಭಾವಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಅವರಿಗೆ ಮಾರ್ಗದರ್ಶನದ ಅವಶ್ಯಕತೆ ಇದೆ’ ಎಂದು ನಿವೃತ್ತ ಪ್ರಾಚಾರ್ಯ ವೈಜನಾಥ ಕೋಳಾರ ಹೇಳಿದರು.
ನಗರದ ಕೊಹಿನೂರ ವಾಣಿಜ್ಯ ಪದವಿ ಕಾಲೇಜಿನಲ್ಲಿ ನೆಹರೂ ಯುವ ಕೇಂದ್ರ ಹಾಗೂ ಪ್ರಯೋಗ ಯುವಕ ಸಂಘದ ವತಿಯಿಂದ ಬುಧವಾರ ಏರ್ಪಡಿಸಿದ್ದ ಶೈಕ್ಷಣಿಕ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಯುವಕರು ತಮ್ಮದೇಯಾದ ಭ್ರಮಾಲೋಕದಲ್ಲಿ ತೇಲುತ್ತ, ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಡುವ ಮೂಲಕ ಅವರನ್ನು ಭ್ರಮಾಲೋಕದಿಂದ ಹೊರತರಬೇಕು’ ಎಂದರು.
ಎಚ್.ಬಿ.ಪಾಟೀಲ ಮಾತನಾಡಿ, ‘ಶಿಕ್ಷಣ ವ್ಯಕ್ತಿಗೆ ಜ್ಞಾನವನ್ನು ನೀಡಿ, ಮೌಢ್ಯ, ಕಂದಾಚಾರ, ಅಂಧಶ್ರದ್ಧೆಯಿಂದ ಹೊರಬರುವಂತೆ ಮಾಡುತ್ತದೆ. ಯುವಕರು ಉತ್ಸಾಹ, ಆತ್ಮವಿಶ್ವಾಸ, ಸೇವಾ ಮನೋಭಾವ, ತಾಳ್ಮೆ, ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು’ ಎಂದರು.
ನೆಹರೂ ಯುವ ಕೇಂದ್ರದ ಜಿಲ್ಲಾ ಸಂಯೋಜಕ ಡಿ. ದಯಾನಂದ ಮಾತನಾಡಿ, ‘ಯುವಕರಲ್ಲಿ ಜಾಗೃತಿ ಮೂಡಿಸಲು ಮತ್ತು ಅವರು ಸಮಾಜದ ಮುಖ್ಯ ವಾಹಿನಿಯಿಂದ ವಿಮುಖರಾಗದಂತೆ ನೋಡಿಕೊಳ್ಳಲು ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.
ಕಾಲೇಜಿನ ಆಡಳಿತಾಧಿಕಾರಿ ಪ್ರಕಾಶ ರೋಳೆ, ಪ್ರಾಚಾರ್ಯ ಹಣಮಂತರಾಯ ಕಂಟೇಗೋಳ, ಉಪನ್ಯಾಸಕರಾದ ಅರುಣಕುಮಾರ ರಾಠೋಡ, ಶರಣಯ್ಯ ಸ್ವಾಮಿ ಇದ್ದರು.