ತುಮಕೂರು: ಲೋಕಾಯುಕ್ತರಿಗೆ ಚಾಕುವಿನಿಂದ ಇರಿದಿದ್ದ ಆರೋಪಿ ತೇಜರಾಜ್ ಶರ್ಮಾನನ್ನು ಹೆಚ್ಚಿನ ತನಿಖೆಗೆ ಗುರುವಾರ ಇಲ್ಲಿನ ಬಿದಿರು ಮಳೆ ಬಡಾವಣೆಗೆ ಕರೆ ತರಲಾಗಿದೆ.
ಆರೋಪಿ ತೇಜರಾಜ್ ಶರ್ಮಾ ವಾಸವಿದ್ದ ಬಿದಿರುಮೆಳೆ ಬಡಾವಣೆಯಲ್ಲಿನ ಬಾಡಿಗೆ ಮನೆಯನ್ನು ವಿಧಾನಸೌಧ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಬಿ.ಶಂಕರಾಚಾರ್ ನೇತೃತ್ವದ 9 ಜನರ ತನಿಖಾ ತಂಡ ಪರಿಶೀಲನೆ ನಡೆಸಿತು.
ಮಧ್ಯಾಹ್ನ ತೇಜರಾಜ್ ಶರ್ಮಾನನ್ನು ಕೈಗೆ ಕೊಳಹಾಕಿಕೊಂಡು ಕರೆ ತಂದ ತನಿಖಾಧಿಕಾರಿಗಳು ಮೂರನೇ ಅಂತಸ್ತಿನಲ್ಲಿದ್ದ ಶರ್ಮಾನ ಕೋಣೆಗೆ ಕರೆದೊಯ್ದು ಪರಿಶೀಲನೆ ನಡೆಸಿದರು.
ಕೊಠಡಿಯಲ್ಲಿದ್ದ ಏಕಾಗ್ರತೆ, ಇಂದ್ರಜಾಲ, ಮಾಟ ಮಂತ್ರಕ್ಕೆ ಸಂಬಂಧಪಟ್ಟ ಕೆಲ ಪುಸ್ತಕಗಳು ಹಾಗೂ ಕೆಲ ದಾಖಲೆ ಪತ್ರಗಳನ್ನು ತನಿಖಾ ತಂಡ ವಶಕ್ಕೆ ಪಡೆಯಿತು.
ಸುಮಾರು ಅರ್ಧ ಗಂಟೆಗೂ ಹೆಚ್ಚು ಹೊತ್ತು ಕೊಠಡಿಯಲ್ಲಿಯೇ ತನಿಖಾ ತಂಡದ ಅಧಿಕಾರಿಗಳು ಪುಸ್ತಕಗಳನ್ನು ಪರಿಶೀಲಿಸಿದರು.
ಈ ಪುಸ್ತಕಗಳನ್ನು ಯಾಕೆ ಓದುತ್ತಿದ್ದೆ? ಎಷ್ಟು ದಿವಸಗಳಿಂದ ಓದುತ್ತಿದ್ದೆ? ಓದುವ ಉದ್ದೇಶವೇನು? ಎಂಬ ಪ್ರಶ್ನೆಗಳು ಸೇರಿ ಹಲವು ಪ್ರಶ್ನೆಗಳನ್ನು ತನಿಖಾಧಿಕಾರಿಗಳು ಆರೋಪಿಗೆ ಪ್ರಶ್ನಿಸಿದರು ಎಂದು ತಿಳಿದಿದೆ.
ಕೊಠಡಿಯ ಬಾಗಿಲಿಗೆ ದೃಷ್ಟಿ ಗೊಂಬೆಯ ತರಹದ ಗೊಂಬೆಯನ್ನು ಕಟ್ಟಿದ್ದರ ಬಗ್ಗೆಯೂ ತನಿಖಾಧಿಕಾರಿ ಪ್ರಶ್ನಿಸಿದ್ದಾರೆ ಎಂದು ತಿಳಿದಿದೆ.
ಕೊಠಡಿ ಪರಿಶೀಲನೆ ಬಳಿಕ ತನಿಖಾಧಿಕಾರಿ ಬಿ.ಶಂಕರಾಚಾರ್ ಅವರು ಮನೆ ಮಾಲೀಕರಾದ ವೆಂಕಟಮ್ಮ ಅವರ ಕುಟುಂಬದ ಸದಸ್ಯರಿಂದ ಅರೋಪಿ ಬಗ್ಗೆ ಮಾಹಿತಿ ಪಡೆದರು.
ಯಾವ ಆಧಾರದ ಮೇಲೆ ಬಾಡಿಗೆ ಕೊಡಲಾಗಿತ್ತು? ಅಗ್ರಿಮೆಂಟ್ ಏನಾದರೂ ಇದೆಯೆ? ವಿಳಾಸ, ಏನು ಕೆಲಸ ಮಾಡುತ್ತಿದ್ದಾನೆ, ಯಾವ ಊರು ಎಂಬುದರ ಬಗ್ಗೆ ಏನು ಮಾಹಿತಿ ನೀಡಿದ್ದ ಎಂಬುದರ ಬಗ್ಗೆ ತನಿಖಾಧಿಕಾರಿಗಳು ಪ್ರಶ್ನಿಸಿದರು.
ಬಳಿಕ ಆರೋಪಿ ಶರ್ಮಾನನ್ನು ಹೊಸ ಬಡಾವಣೆ ಠಾಣೆಗೆ ಕರೆತಂದರು. ಡಿವೈಎಸ್ಪಿ ಕೆ.ಎಸ್. ನಾಗರಾಜ್, ಇನ್ಸ್ಪೆಕ್ಟರ್ ರಾಧಾಕೃಷ್ಣ ತನಿಖಾ ತಂಡಕ್ಕೆ ಸಹಕರಿಸಿದರು.