ವಿಜಯಪುರ: ಇಲ್ಲಿಗೆ ಸಮೀಪದ ಜುಮನಾಳ ಗ್ರಾಮದಲ್ಲಿರುವ ವಿಠ್ಠಲ-ರುಕ್ಮಾಯಿ ಮಂದಿರದಲ್ಲಿ ಕಾರ್ತಿಕ ಏಕಾದಶಿ ಪ್ರಯುಕ್ತ ಈಚೆಗೆ ವಿಶೇಷ ಕಾರ್ಯಕ್ರಮಗಳು ಜರುಗಿದವು.
ನಾಡಿನ ವಿವಿಧ ಭಾಗಗಳಿಂದ ಪಂಢರಪುರ ಭಕ್ತರ ದಿಂಡಿಗಳು ದೇವಾಲಯಕ್ಕೆ ಬಂದವು. ವಾರಕರಿ ಭಜನಾ ಮಂಡಳಿಗಳು ಸುಶ್ರಾವ್ಯವಾಗಿ ವಿಠೋಬನ ಸ್ತುತಿಸುವ ಹಾಡುಗಳನ್ನು ಹಾಡುವ ಮೂಲಕ ಭಕ್ತಿ ಪ್ರದರ್ಶಿಸಿದರು.
ಬೆಳಿಗ್ಗೆ ಭಗವದ್ಗೀತಾ ಮಂಡಳಿ ಸದಸ್ಯರು ಒಂದು ಗಂಟೆ ಭಗವದ್ಗೀತೆಯನ್ನು ಪಠಿಸಿದರು. ಸಹಸ್ರಾರು ಭಕ್ತರು ಬಂದು ವಿಠ್ಠಲನ ದರ್ಶನ ಪಡೆದು ಪುನೀತರಾದರು. ಮಹಿಳೆಯರು ಸಂಗೀತ ಸೇವೆ ಮಾಡಿದರು.
ದೇವಾಲಯದ ಧರ್ಮದರ್ಶಿ ಕಿರಣಭಟ್ಟ ಜೋಶಿ (ಜುಮನಾಳಕರ) ಪರಿವಾರದವರು ಪ್ರಸಾದ ವ್ಯವಸ್ಥೆ ಮಾಡಿದ್ದರು.
ಅರವಿಂದ ಜೋಶಿ, ವಿಲಾಸ ಜೋಶಿ, ಗಣಪತಿ ಜೋಶಿ, ಅಶೋಕ ದೀಕ್ಷಿತ್, ಶಂಭು ಭಟ್ಟ ಜೋಶಿ, ಶಾಮಭಟ್ಟ ಜೋಶಿ, ಅರುಣ ಸೊಲ್ಲಾಪುರಕರ್, ಶಂಕರ ಕುಲಕರ್ಣಿ (ಗಿರಗಾಂವಿ), ಪಿ.ಜಿ.ಸಿದ್ಧಾಂತಿ ಇದ್ದರು.