ಮಾಗಡಿ: ಶಾಲಾ ಮಕ್ಕಳನ್ನು ಮೊಬೈಲ್ನಿಂದ ದೂರ ಇಡಬೇಕು. ಬದಲಾಗಿ ಅವರ ಕೈಗೆ ಆಟಿಕೆ ಸಾಮಗ್ರಿ ಮತ್ತು ಪುಸ್ತಕ ಕೊಟ್ಟು ಓದಿಸುವುದನ್ನು ಅಭ್ಯಾಸ ಮಾಡಿಸಬೇಕೆಂದು ಬಿಇಒ ಸಿದ್ದೇಶ್ವರ.ಎಸ್ ಸಲಹೆ ನೀಡಿದರು.
ತೊರೆಪಾಳ್ಯದ ಪಾರಂಗ ಪಿರಮಿಡ್ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಮಕ್ಕಳ ಮೇಲೆ ಹೆಚ್ಚು ಅಂಕ ಗಳಿಸಬೇಕೆಂದು ಒತ್ತಡ ಹೇರುವ ಬದಲು ಮಾನವೀಯ ಮೌಲ್ಯ ಕಲಿಸಬೇಕು. ಮಕ್ಕಳನ್ನು ವ್ಯಸನಗಳಿಂದ ಮುಕ್ತರನ್ನಾಗಿಸಲು ಪುಸ್ತಕ ಪ್ರೀತಿ ಬೆಳೆಸಬೇಕು’ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಲೇಖಕರ ವೇದಿಕೆ ಅಧ್ಯಕ್ಷ ಖಂಡಪರಶು ಮಾತನಾಡಿ, ‘ಮಾಗಡಿ ಸೀಮೆಯ 22 ಪ್ರವಾಸಿ ತಾಣಗಳಲ್ಲಿ ವಿಶ್ವದ ಏಕೈಕ ಪಿರಮಿಡ್ ಶಾಲೆಯೂ ಸೇರ್ಪಡೆಯಾಗಿದೆ. 20 ವರ್ಷಗಳ ಹಿಂದೆ ಸ್ಥಾಪನೆಯಾಗಿರುವ ಪಾರಂಗ ಪಿರಮಿಡ್ ಶಾಲೆ ಗ್ರಾಮೀಣ ಹೆಣ್ಣು ಮಕ್ಕಳಿಗೆ ಹೆಚ್ಚಿನ ಪ್ರಾತಿನಿಧ್ಯತೆ ನೀಡುವುದರ ಮೂಲಕ ಶೇ100 ಫಲಿತಾಂಶ ತಂದು ಕೊಟ್ಟಿದೆ. ಶೈಕ್ಷಣಿಕವಾಗಿ ಕಡಿಮೆ ಖರ್ಚಿನ ಅನುದಾನರಹಿತ ಶಾಲೆಗೆ ದಾನಿಗಳ ಸಹಕಾರದಿಂದ ನಡೆಯುತ್ತಿರುವುದು ವಿಶೇಷ’ ಎಂದರು.
ಶಾಲೆಯ ಸಂಸ್ಥಾಪಕ ವಿಜ್ಞಾನಿ ರಾಮಮೂರ್ತಿ, ಮುಖ್ಯಶಿಕ್ಷಕ ಲಕ್ಷ್ಮಣ್, ಮುರಳಿ ಅಚ್ಯುತರಾಮನ್ ಮತ್ತು ಶ್ರೀದೇವಿ, ಲೇಖಕ ಕಡೆಮನೆ ಕುಮಾರ ಇದ್ದರು.