ಶಿವಮೊಗ್ಗ:ಸಾಗರ ತಾಲ್ಲೂಕು ಅರಳಗೋಡು ಸುತ್ತಲ ಗ್ರಾಮಗಳ 9 ಜನರಲ್ಲಿ ಶಂಕಿತ ಮಂಗನಕಾಯಿಲೆ ರೋಗ ಲಕ್ಷಣಗಳು ಇರುವುದು ಮಂಗಳವಾರ ಪತ್ತೆಯಾಗಿದೆ.
9 ಜನರಲ್ಲಿ ಇಬ್ಬರಿಗೆ ಸೋಂಕು ತಗುಲಿರುವುದು ಇದು ಎರಡನೇ ಬಾರಿ. ಜ್ವರದಿಂದ ಬಳಲುತ್ತಿರುವ ಎಲ್ಲರನ್ನೂ ಸರ್ಕಾರಿ ಅಂಬುಲೆನ್ಸ್ನಲ್ಲಿ ಮಣಿಪಾಲದ ಕಸ್ತೂರ ಬಾ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.ಆನಂದಪುರ, ಗೌತಮಪುರ, ಕಲ್ಮನೆ ಭಾಗಗಳಲ್ಲಿ ಸತ್ತ ಮಂಗಗಳು ಪತ್ತೆಯಾಗಿವೆ.
ಹಬ್ಬದ ದಿನವೂ ಕೆಲಸ: ಆರೋಗ್ಯ ಇಲಾಖೆಯ30ಕ್ಕೂ ಹೆಚ್ಚು ಸಿಬ್ಬಂದಿ ಮಕರ ಸಂಕ್ರಮಣದ ದಿನವೂ ಜನರಿಗೆ ಮಂಗನಕಾಯಿಲೆ ನಿರೋಧಕ ಲಸಿಕೆ ಹಾಕುವ ಕಾರ್ಯದಲ್ಲಿ ತೊಡಗಿದ್ದರು.
ಇದುವರೆಗೆ 60 ಜನರಿಗೆ ಮಂಗನಕಾಯಿಲೆ ಇರುವುದು ದೃಢಪಟ್ಟಿದೆ. 50 ಜನರು ಗುಣಮುಖರಾಗಿದ್ದಾರೆ ಎಂದು ಸಾಗರ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಜು ಮಾಹಿತಿ ನೀಡಿದರು.