ಕೋಣಂದೂರು: ಸಮೀಪದ ಉಡುಕೆರೆಯ ಬಿ.ಎಸ್. ಸುಬ್ರಹ್ಮಣ್ಯ ಆಚಾರ್ (53) ಮಂಗನ ಕಾಯಿಲೆಯಿಂದ ಸೋಮವಾರ ಮೃತಪಟ್ಟಿದ್ದಾರೆ. ಇದರಿಂದ ತಾಲ್ಲೂಕಿನಲ್ಲಿ ಮಂಗನ ಕಾಯಿಲೆಯಿಂದ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿದೆ. ಮಲೆನಾಡಿಗರಲ್ಲಿ ಆತಂಕ ಮನೆಮಾಡಿದೆ.
ಮರದ ಕೆಲಸ (ಬಡಗಿ) ಮಾಡಿಕೊಂಡಿದ್ದ ಸುಬ್ರಹ್ಮಣ್ಯ ಆಚಾರ್ ಅವರಿಗೆ ಮಾರ್ಚ್ 26ರಿಂದ ಜ್ವರ ಕಾಣಿಸಿಕೊಂಡಿದ್ದು, ರಕ್ತ ಪರೀಕ್ಷೆಯಿಂದ ಮಂಗನಕಾಯಿಲೆ ದೃಢಪಟ್ಟ ಕಾರಣ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.