ವಿಜಯಪುರ: ‘ಖಾದಿ ಈ ದೇಶದ ಸ್ವಾಭಿಮಾನದ ಸಂಕೇತವಾಗಿದ್ದು, ಭಾತರದ ಗುಡಿ ಕೈಗಾರಿಕೆಗಳು ಇಂದಿಗೂ ಖಾದಿಯನ್ನೇ ನಂಬಿ ಜೀವನ ಸಾಗಿಸುತ್ತಿವೆ’ ಎಂದು ಹಿರಿಯ ಪತ್ರಕರ್ತ ಗೋಪಾಲ ನಾಯಕ ಹೇಳಿದರು.
ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದ ಆವರಣದಲ್ಲಿ ಸೋಮವಾರ ನಡೆದ 15 ದಿನಗಳ ಖಾದಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ದೇಶ ಕಟ್ಟುವಲ್ಲಿ ಖಾದಿ ತನ್ನದೇಯಾದ ಪಾತ್ರವನ್ನು ವಹಿಸಿದೆ. ಗಾಂಧಿ ಅವರ ಪ್ರಿಯ ವಸ್ತುಗಳಲ್ಲಿ ಖಾದಿ ಅಗ್ರಗಣ್ಯವಾಗಿತ್ತು. ಹೀಗಾಗಿ, ಗಾಂಧಿ ಖಾದಿಗೆ ಅಗ್ರಗಣ್ಯ ಸ್ಥಾನವನ್ನು ನೀಡಿದ್ದರು. ಸರ್ಕಾರ ಖಾದಿಯನ್ನು ಬೆಳೆಸಲು ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಿದೆ. ಆದರೆ, ಅವು ತಳ ಮಟ್ಟದಲ್ಲಿ ತಲುಪಿದಾಗ ಮಾತ್ರ ಎಲ್ಲರೂ ಉತ್ತಮ ಜೀವನ ನಡೆಸಲು ಸಾಧ್ಯ’ ಎಂದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ ಮಾತನಾಡಿ, ‘ಖಾದಿ ಕೇವಲ ಬಟ್ಟೆಯಲ್ಲ; ಅದು ಸೌಭಿಮಾನದ ಸಂಕೇತ. ಖಾದಿ ಪ್ರೀತಿಯ, ಒಗ್ಗಟ್ಟಿ ಪ್ರತೀಕವಾಗಿದೆ. ದೇಶದ ಜನರು ಪಾಶ್ಚಿಮಾತ್ಯ ಸಂಸ್ಕೃತಿಯಿಂದ ದೂರ ಸರಿದು ಮತ್ತೆ ದೇಶದ ಸಂಸ್ಕೃತಿಯತ್ತ ವಾಲುತ್ತಿದ್ದಾರೆ’ ಎಂದು ಹೇಳಿದರು.
ಎಂಎಕೆ ಕಾಲೇಜಿನ ಪ್ರಾಚಾರ್ಯ ಸಂಗಮೇಶ ಮೇತ್ರಿ ಮಾತನಾಡಿ, ‘ಖಾದಿ ಗ್ರಾಮೋದ್ಯೋಗ ದೇಶದ ಭದ್ರ ಬುನಾದಿಯಾಗಿದ್ದು, ಖಾದಿಗೆ ಉತ್ತೇಜನ ಮಾಡಿದಾಗ ಮಾತ್ರ ದೇಶ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ’ ಎಂದರು.
ಕೆಕೆಜಿಎಸ್ ಅಧ್ಯಕ್ಷ ಬಾಪುಗೌಡ ಪಾಟೀಲ, ಖಾದಿ ಆಯೋಗದ ವಿಭಾಗೀಯ ನಿರ್ದೇಶಕ ಎಸ್.ಎಸ್.ತಾಂಬೆ, ಖಾದಿ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಸಾವಿತ್ರಮ್ಮ ದಳವಾಯಿ, ಸಿದ್ಧಾರ್ಥ, ರಾಜಶೇಖರ ದೈವಾಡಿ, ಎಸ್.ಎಲ್.ಹಿರೇಮಠ ಇದ್ದರು.