ಮಡಿಕೇರಿ: ನಗರದ ಗೌಳಿಬೀದಿಯಲ್ಲಿ ಅವೈಜ್ಞಾನಿಕವಾಗಿ ಒಳಚರಂಡಿ ಕಾಮಗಾರಿ ನಡೆಸಿದ್ದರಿಂದ ಸಡಿಲ ಗೊಂಡಿದ್ದ ತಡೆಗೋಡೆ ಕುಸಿದಿದ್ದು, ದೊಡ್ಡ ಅಪಾಯವೊಂದು ತಪ್ಪಿದೆ. ತಡೆಗೋಡೆ ಕುಸಿದ ಸ್ಥಳದಲ್ಲಿ ಯಾವುದೇ ಮನೆಗಳು ಇಲ್ಲದೇ ಇದ್ದುದ್ದರಿಂದ ಅನಾಹುತ ಸಂಭವಿಸಿಲ್ಲ.
ನಗರದ ಆಕಾಶವಾಣಿ ಸಮೀಪ ಗೌಳಿಬೀದಿಯ ಕಂಚಿ ಕಾಮಾಕ್ಷಿ ದೇವಾಲಯದ ಸಮೀಪ ನಿವಾಸಿ ಸುರೇಶ್ ಎಂಬುವರ ಮನೆಯ ಹಿಂಬದಿಯ ತಡೆಗೋಡೆ ಸೋಮವಾರ ರಾತ್ರಿ ಸುರಿದ ಮಳೆಗೆ ಏಕಾಏಕಿ ಕುಸಿದಿದೆ. ಈ ಘಟನೆಯಿಂದ ಸ್ಥಳೀಯರಲ್ಲೂ ಆತಂಕ ಹೆಚ್ಚಿದೆ.
ಘಟನಾ ಸ್ಥಳಕ್ಕೆ ರಾತ್ರಿಯೇ ಎನ್ಡಿಆರ್ಎಫ್ ತಂಡ, ನಗರ ಪೊಲೀಸ್ ಸಿಬ್ಬಂದಿ ಹಾಗೂ ಉಪ ವಿಭಾಗಾಧಿಕಾರಿ ಜವರೇಗೌಡ ಭೇಟಿ ನೀಡಿ ಪರಿಶೀಲಿಸಿದರು.
ಅಪಾಯ ಸ್ಥಳದಲ್ಲಿದ್ದ ಮೂರು ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಅವರಿಗೆ ಬೇಕಾದ ವ್ಯವಸ್ಥೆಗಳನ್ನು ಜಿಲ್ಲಾಡಳಿತವು ಕಲ್ಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.