ನಾಪೋಕ್ಲು: ಸಮೀಪದ ಯವಕಪಾಡಿ ಗ್ರಾಮದ ಇತ್ತಕಂಡಿ ಅರಣ್ಯ ಪ್ರದೇಶದಲ್ಲಿ ಭಾನುವಾರ ಬೆಳಗಿನ ಜಾವ ಕಾಳ್ಗಿಚ್ಚು ಕಾಣಿಸಿಕೊಂಡು, ಸುಮಾರು 35 ಎಕರೆ ಪ್ರದೇಶ ಬೆಂಕಿಗೆ ಆಹುತಿಯಾಗಿದೆ.
ಖಾಸಗಿ ಹಾಗೂ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡಿದ್ದು, ಸಂಜೆಯ ವೇಳೆಗೆ ಇಲಾಖೆಯ ಸಿಬ್ಬಂದಿ ಶ್ರಮವಹಿಸಿ ಬೆಂಕಿ ನಂದಿಸಿದ್ದಾರೆ.
‘ಭಾನುವಾರ ಬೆಳಿಗ್ಗೆ ಕುರುಚಲು ಕಾಡು ಹೊತ್ತಿ ಉರಿಯುತ್ತಿದ್ದುದನ್ನು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು. ಸ್ಥಳೀಯರ ಕೃಷಿ ಭೂಮಿಗೆ ಕಾಳ್ಗಿಚ್ಚಿನಿಂದ ಹೆಚ್ಚು ಹಾನಿಯಾಗಿಲ್ಲ. ಬೆಸಿಗೆ ಬಿಸಿಲು ಹೆಚ್ಚಿದ್ದರಿಂದ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿರಬಹುದು’ ಎಂದು ಸ್ಥಳೀಯ ಮುತ್ತಪ್ಪ ಹೇಳಿದರು.
‘ಇಲಾಖೆಯ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದ್ದರಿಂದ ಭಾನುವಾರ ಸಂಜೆ ವೇಳೆಗೆ ಕಾಳ್ಗಿಚ್ಚು ಹತೋಟಿಗೆ ಬಂದಿದೆ’ ಎಂದು ಭಾಗಮಂಡಲ ವಲಯ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.