ಮಡಿಕೇರಿ: ಅಬ್ಬಿ ಫಾಲ್ಸ್ನಲ್ಲಿ ಪ್ರವಾಸಿಗರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸುತ್ತಿರುವ ವಿಡಿಯೊ ವಾಟ್ಸ್ಆ್ಯಪ್ಗಳಲ್ಲಿ ಹೆಚ್ಚಾಗಿ ಹರಿದಾಡುತ್ತಿದೆ.
ವಾಹನ ನಿಲುಗಡೆ ಸಂಬಂಧ ಉಂಟಾದ ವಿವಾದ ಹಲ್ಲೆಗೆ ಕಾರಣವಾಗಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸರು ಸ್ವಯಂಪ್ರೇರಿತವಾಗಿ ಮೂವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
‘ರಸ್ತೆಯಲ್ಲಿ ಗಲಾಟೆ ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ ಆರೋಪದ ಮೇರೆಗೆ ಭರತ್, ಸುಬ್ಬಯ್ಯ ಹಾಗೂ ಪ್ರಜ್ವಲ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹಲ್ಲೆಗೆ ಒಳಗಾದವರು ಯಾರೂ ದೂರು ಕೊಟ್ಟಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಅಬ್ಬಿಫಾಲ್ಸ್ನಲ್ಲಿ ಕೆಲವು ಪ್ರವಾಸಿಗರು ವಾಹನಗಳನ್ನು ನಿಲುಗಡೆ ತಾಣದಲ್ಲಿ ನಿಲ್ಲಿಸದೇ ರಸ್ತೆಬದಿಯಲ್ಲಿ ನಿಲ್ಲಿಸುವುದರಿಂದ ವಾಹನ ನಿಲುಗಡೆ ತಾಣದ ಸಿಬ್ಬಂದಿಗೂ ಪ್ರವಾಸಿಗರಿಗೂ ಆಗಾಗ್ಗೆ ವಾಗ್ವಾದಗಳು ಏರ್ಪಡುತ್ತಿವೆ. ಇಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಬೇಕು ಎನ್ನುವ ಒತ್ತಾಯವೂ ಕೇಳಿ ಬಂದಿದೆ.