ಕುಶಾಲನಗರ: ಇಲ್ಲಿನ ಹುದುಗೂರು ಗ್ರಾಮದಲ್ಲಿ ಶನಿವಾರ ಬೈಕ್ ಮತ್ತು ಟಿಪ್ಪರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಯಡವನಾಡು ಗ್ರಾಮದ ನಿವಾಸಿ ಪ್ರವೀಣ್ (46) ಮೃತಪಟ್ಟಿದ್ದಾರೆ.
ಇವರು ಸಂಜೆ ಹಾರಂಗಿಯಿಂದ ಹುದುಗೂರು ಮಾರ್ಗವಾಗಿ ತಮ್ಮ ಬೈಕ್ನಲ್ಲಿ ಮನೆಗೆ ತೆರಳುತ್ತಿದ್ದಾಗ ಸೋಮವಾರಪೇಟೆ ಕಡೆಯಿಂದ ವೇಗವಾಗಿ ಬರುತ್ತಿದ್ದ ಟಿಪ್ಪರ್ ವಾಹನ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ಪ್ರವೀಣ್ ಅವರ ತಲೆಗೆ ಗಂಭೀರವಾದ ಪೆಟ್ಟು ಬಿದ್ದು, ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಈ ಸಂಬಂಧ ಟಿಪ್ಪರ್ ವಾಹನ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.