ಶನಿವಾರಸಂತೆ: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೈತರ ಬೆಳೆ ನಾಶಪಡಿಸುತ್ತಾ ಮಕ್ಕಳು-ಮಹಿಳೆಯರೆನ್ನದೆ ಜನರ ಮೇಲೆ ದಾಳಿ ಮಾಡುತ್ತಾ ಪುಂಡಾಟ ನಡೆಸಿ ಭಯ ಹುಟ್ಟಿಸಿದ್ದ ವಾರಸುದಾರರಿಲ್ಲದ ಗೂಳಿಯನ್ನು ಕೂಗೂರು ಗ್ರಾಮಸ್ಥರು ಹಿಡಿದು ಮೈಸೂರಿನ ಗೋಶಾಲೆ ಪಿಂಜರಾಪೋಲ್ಗೆ ಕಳುಹಿಸಿದರು.
ಗೌಡಳ್ಳಿ, ಕೂಗೂರು, ಬೀಟಿಕಟ್ಟೆ, ಕೋಟೆಯೂರು, ಹೆಗ್ಗಳ ಗ್ರಾಮಗಳಲ್ಲಿ ಹಲವು ವರ್ಷಗಳಿಂದ ಸಂಚರಿಸುತ್ತಿದ್ದ ಗೂಳಿ ಇತ್ತೀಚೆಗೆ ಗ್ರಾಮಗಳಲ್ಲಿ ಬಹಳ ದಾಂದಲೆ ನಡೆಸುತ್ತಿತ್ತು. ಗ್ರಾಮಸ್ಥರು ಹಾಗೂ ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಕಾರ್ಯಕರ್ತರು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ ಬಳಿಕ ಪಿಡಿಒ ಲಿಖಿತಾ ಗೂಳಿಯನ್ನು ಸಾಗಿಸಲು ಅನುಮತಿ ಪತ್ರ ನೀಡಿದರು.
ಗೂಳಿ ಹಿಡಿಯಲು ಕೂಗೂರು ಗ್ರಾಮಸ್ಥರಾದ ಸುಮಂತ್, ಲೋಕೇಶ್, ಚಂದ್ರಶೇಖರ್, ದಯಾನಂದ್, ಸಿಂಚನ್, ಶಿವಕುಮಾರ್, ಅರ್ಜುನ್, ಕರುಣ್, ಹೂವಯ್ಯ, ಸಂದೀಪ್, ಅಶ್ವಥ್, ಮಿಲನ್ ಸಹಕರಿಸಿದರು.