ಕುಶಾಲನಗರ: ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಾದ ಕೂಡಿಗೆ, ಸಿದ್ದಲಿಂಗಪುರ ಹಾಗೂ ಏಳನೇ ಹೊಸಕೋಟೆ ಗ್ರಾಮಗಳಲ್ಲಿ ಕ್ರೈಸ್ತರು ಕ್ರಿಸ್ಮಸ್ ಹಬ್ಬವನ್ನು ಮಂಗಳವಾರ ಸಡಗರದಿಂದ ಆಚರಿಸಿದರು.
ಕುಶಾಲನಗರದಲ್ಲಿ ಸಂತ ಸೆಬಾಸ್ಟಿನ್ರ ದೇವಾಲಯ ಮತ್ತು ಮೆಡ್ಲಾಕ್ ಚರ್ಚ್ಗೆ ಹೋಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇವಾಲಯವನ್ನು ಬಣ್ಣ–ಬಣ್ಣದ ವಿದ್ಯುತ್ ದೀಪಗಳಿಂದ ಸಿಂಗರಿಸಲಾಯಿತು. ಧರ್ಮಗುರು ಫಾ.ಮೈಕಲ್ ಮರಿ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು. ‘ಏಸು ನಮ್ಮ ಜೀವನದಲ್ಲಿ ಸಮಾಧಾನ ಕೊಡುವುದಕ್ಕಾಗಿ ಹುಟ್ಟಿದ್ದಾನೆ’ ಎಂದರು. ಕ್ರಿಸ್ಮಸ್ ಎಂಬುದು ಸೌಹಾರ್ದದ ಪ್ರತೀಕ. ಜಾತಿ-ಧರ್ಮಗಳ ಭೇದವಿಲ್ಲದೆ ವಿವಿಧೆಡೆ ಸಾಮೂಹಿಕವಾಗಿ ಆಚರಿಸಲಾಗುತ್ತಿದೆ’ ಎಂದು ಹೇಳಿದರು.
ಕೂಡಿಗೆ ಹೋಲಿ ಫ್ಯಾಮಿಲಿ ಚರ್ಚ್ ಧರ್ಮಗುರು ಸ್ವಾಮಿ ಸ್ಟೀಫನ್ ಜೋಸೆಫ್ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಏಳನೇ ಹೊಸಕೋಟೆ ಸಂತಮೇರಿ ಮತ್ತು ಸಿದ್ದಲಿಂಗಪುರ ಗ್ರಾಮದಲ್ಲಿ ಸಂತ ಅನ್ನಮ್ಮ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಕ್ರೈಸ್ತರು ಪರಸ್ಪರ ಸಿಹಿ ವಿತರಿಸಿ ಶುಭಾಶಯ ವಿನಿಮಯ ಮಾಡಿಕೊಂಡರು.
ಸಾಂಟಾಕ್ಲಾಸ್ ವೇಷ ಧರಿಸಿದ್ದ ಪುಟಾಣಿ ಮಕ್ಕಳು ಮನೆ ಮನೆಗೆ ತೆರಳಿ ಶುಭಾಶಯ ಹಂಚಿಕೊಂಡರು. ಹಲವರ ಮನೆಗಳಲ್ಲಿ ಕೊಟ್ಟಿಗೆ ನಿರ್ಮಿಸಿ, ಅದರಲ್ಲಿ ಬಾಲ ಏಸುವಿನ ಹಾಗೂ ಮಾತೆ ಮೇರಿಯ ಗೊಂಬೆ ಸ್ಥಾಪಿಸಲಾಗಿತ್ತು. ಕ್ರಿಸ್ಮಸ್ ಟ್ರೀಗೆ ಅಲಂಕಾರ ಮಾಡಲಾಗಿತ್ತು. ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.
ಕುಶಾಲನಗರ ಚರ್ಚ್ ಆಡಳಿತ ಮಂಡಳಿ ಪ್ರಮುಖಂಡರಾದ ಶಾಜಿ ಕೆ.ಜಾರ್ಜ್, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಕ್ರೆಜ್ವಲ್ ಕೋಟ್ಸ್, ರಾಯ್, ಏಸುದಾಸ್, ಜಾನ್, ಫಿಲಿಪ್ ವಾಸ್, ಅಂಥೋಣಿ ಪ್ರಭುರಾಜ್ , ಜೋಸೆಫ್, ಸವರಿನ್ ಡಿಸೋಜ, ಶಿಬುಥಾಮಸ್, ಶಾಂತಪ್ಪ ಇದ್ದರು.