ಸುಂಟಿಕೊಪ್ಪ: ಸಮೀಪದ ಗರಗಂದೂರು ಮಲ್ಲಿಕಾರ್ಜುನ ಕಾಲೊನಿಯಲ್ಲಿ ಸೋಮವಾರ ನಡೆದ ಕಮಾನು ಉದ್ಘಾಟನೆಯ ವೇಳೆ ಎರಡು ಗುಂಪುಗಳ ನಡುವೆ ಜಟಾಪಟಿ ನಡೆದಿದೆ. ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರ ಎದುರೇ ಗಲಾಟೆ ನಡೆದಿದೆ.
ಕಮಾನು ಉದ್ಘಾಟನೆ ಆಗುತ್ತಿದ್ದಂತೆಯೇ ಸ್ಥಳೀಯರೊಬ್ಬರು, ಕಾಲೊನಿಯ ಬದಲಿಗೆ ನಗರ ಎಂದು ನಾಮಕರಣ ಮಾಡಬೇಕು; ಹಳದಿ ಬಣ್ಣದ ಬದಲಿಗೆ ಬಿಳಿ ಬಣ್ಣ ಕಮಾನಿಗೆ ಹಾಕಬೇಕು ಎಂಬ ಆಗ್ರಹಿಸಿದರು. ಆಗ ಎರಡು ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಗಲಾಟೆಯಾಗಿದೆ.
ಕಾರ್ಯಕ್ರಮ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಕೆಲವು ಕಿಡಿಗೇಡಿಗಳು ಯುವಕನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಂತರ ಎರಡು ಕಡೆಯ ಮುಖಂಡರ ಸಮ್ಮುಖದಲ್ಲಿ ಪೊಲೀಸ್ ಠಾಣೆಯಲ್ಲಿ ಸಂಧಾನ ನಡೆದಿದೆ.
ಮಲ್ಲಿಕಾರ್ಜುನ ಕಾಲೊನಿಯಲ್ಲಿರುವ ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿ ಬರುತ್ತಿದ್ದ ಸಂದರ್ಭ ಮುಖಂಡರೊಬ್ಬ ಕಾರಿಗೆ ಮರದ ತುಂಡನ್ನು ಅಡ್ಡ ಇರಿಸಿ ಗುಂಪು ಹಲ್ಲೆ ನಡೆಸಲಾಗಿದೆ. ಕಾರಿನ ಗಾಜುಗಳನ್ನು ಪುಡಿ ಮಾಡಲಾಗಿದೆ.
ಕಾರಿನ ಮೇಲೆ ದಾಳಿ ನಡೆಸಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಒಂದು ಗುಂಪಿನ ಜನರು ಪ್ರತಿಭಟನೆ ನಡೆಸಿದರು. ಪೊಲೀಸರು ಸ್ಥಳದಿಂದ ತೆರಳುವಂತೆ ಸೂಚಿಸಿದ್ದರು. ಆಗ ಪೊಲೀಸರು ಮತ್ತು ಹಿಂದೂ ಸಂಘಟನೆಗಳ ನಡುವೆ ಕೆಲಕಾಲ ಮಾತಿನ ಚಕಾಮಕಿ ನಡೆಯಿತು.
ಸಿಪಿಐ ಮಹೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.