ಕುಶಾಲನಗರ: ಪ್ರತಿಯೊಬ್ಬರು ಪರಿಸರ ಸ್ವಚ್ಚತೆ ಹಾಗೂ ನೈರ್ಮಲ್ಯಕ್ಕೆ ವಿಶೇಷ ಒತ್ತು ನೀಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕು ಎಂದು ಕೂಡುಮಂಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿರವಿ ಸಲಹೆ ನೀಡಿದರು.
ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆ ಹಾಗೂ ಕೊಡಗು ಜಿಲ್ಲಾ ವಿದ್ಯಾಸಾಗರ್ ಕಲಾವೇದಿಕೆ ಆಶ್ರಯದಲ್ಲಿ ಸ್ವಚ್ಛ ಭಾರತ್ ಯೋಜನೆಯಡಿ ಪರಿಸರ ಸ್ವಚ್ಚತೆ ಕುರಿತು ಏರ್ಪಡಿಸಿದ್ದ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರಕ್ಕೆ ಹಾನಿಕರವಾದ ಪ್ಲಾಸ್ಟಿಕ್ ಬಳಕೆಗೆ ಎಲ್ಲರೂ ಕಡಿವಾಣ ಹಾಕಬೇಕು. ಪರ್ಯಾಯವಾಗಿ ಬಟ್ಟೆ ಅಥವಾ ಪೇಪರ ಬ್ಯಾಕ್ ಗಳನ್ನು ಬಳಸಲು ಅಭ್ಯಾಸಿಸಬೇಕು ಎಂದರು.
ಸರ್ಕಾರ ಆದೇಶದ ಪ್ರಕಾರ ಪಂಚಾಯಿತಿ ವ್ಯಾಪ್ತಿಯಲ್ಲಿ ಹನಿಕಾರ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇದಿಸಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಆದ್ದರಿಂದ ವರ್ತಕರು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಯಿಷಾ ಮಾತನಾಡಿ, ಸಾರ್ವಜನಿಕರು ತಮ್ಮ ಮನೆಯ ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಪಂಚಾಯಿತಿ ವತಿಯಿಂದ ಅಳವಡಿಸಿರುವ ಕಸದ ತೊಟ್ಟಿಯಲ್ಲಿಯೇ ಹಾಕಬೇಕು. ಪ್ರತಿ ದಿನ ಕಸ ಸಂಗ್ರಹಿಸಲು ಮನೆ ಹತ್ತಿರ ಬರುವ ಕಸ ಸಂಗ್ರಹ ವಾಹನಕ್ಕೆ ಒಣ ಕಸ ಹಾಗೂ ಹಸಿ ಕಸವನ್ನು ಬೇರ್ಪಡಿಸಿ ಹಾಕಬೇಕು ಎಂದು ಮನವಿ ಮಾಡಿದರು.
ಪಂಚಾಯಿತಿ ಕಾರ್ಯದರ್ಶಿ ಜಿ.ಎಸ್.ಮಾದಪ್ಪ ಮಾತನಾಡಿ, ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳ ಸುತ್ತಮುತ್ತ ಪರಿಸರ ಸ್ವಚ್ಚತೆಗೆ ಆಧ್ಯತೆ ನೀಡುವ ಮೂಲಕ ರೋಗರುಜಿನಗಳು ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಈ ಸಂದರ್ಭ ಗ್ರಾ.ಪಂ.ಉಪಾಧ್ಯಕ್ಷ ಸಣ್ಣಪ್ಪ ಮತ್ತು ಸದಸ್ಯರು ಹಾಗೂ ವಿದ್ಯಾಸಾಗರ ಕಲಾ ವೇದಿಕೆಯ ಕಲಾವಿದ ಈ .ರಾಜು, ಸಹ ಕಲಾವಿದರಾದ ಚಂದ್ರಪ್ಪ, ಗೌರಮ್ಮ, ಲೀಲಾ, ರವಿ, ಬಸವರಾಜು, ಶಿವ, ಪಂಚಾಯಿತಿ ಸಿಬ್ಬಂದಿಗಳಾದ ಅವಿನಾಶ್, ದುಶ್ಯಂತ್ ಇದ್ದರು.