ಮಡಿಕೇರಿ: ಕೇಂದ್ರ ಸರ್ಕಾರದ ಸ್ವಚ್ಛತಾ ಪಕ್ವಾಡ ಅಭಿಯಾನ ಅಂಗವಾಗಿ ಗ್ರೀನ್ ಸಿಟಿ ಫೋರಂ ವತಿಯಿಂದ ಕಳೆದ 10 ದಿನಗಳಿಂದ ಹಮ್ಮಿಕೊಂಡಿರುವ ನಗರದ ಕೋಟೆ ಸ್ವಚ್ಛತಾ ಅಭಿಯಾನ ಪೂರ್ಣ ಪ್ರಮಾಣದಲ್ಲಿ ಸ್ವಚ್ಛಗೊಳಿಸುವ ಮೂಲಕ ಅಭಿಯಾನ ಸಫಲಗೊಂಡಿದೆ.
ಅಭಿಯಾನದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ 85 ಎನ್ಸಿಸಿ ಕೆಡೆಟ್ಗಳು, ಕೂಡಿಗೆ ಸೈನಿಕ ಶಾಲೆಯ 45 ವಿದ್ಯಾರ್ಥಿಗಳು, ನೆಲ್ಲಿಹುದಿಕೇರಿಯ ಮುತ್ತಪ್ಪ ಯುವಕಲಾ ಸಂಘದ 15 ಸದಸ್ಯರು, ಮಡಿಕೇರಿ ಲಯನ್ಸ್ ಕ್ಲಬ್, ಮೂರ್ನಾಡಿನ ಕ್ಲೀನ್ ಇನ್ಸೆಟಿವ್ ಪದಾಧಿಕಾರಿಗಳು ಸೇರಿದ್ದಂತೆ ಸಾರ್ವಜನಿಕರು ಶ್ರಮದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸಂಜೆಯವರೆಗೂ ಸ್ವಚ್ಛತಾ ಕಾರ್ಯ ನಡೆಯಿತು.
ಈ ಸಂದರ್ಭ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಸಂಘ ಸಂಸ್ಥೆಗಳು ಸ್ವಚ್ಛತೆ ಕಾರ್ಯದಲ್ಲಿ ಪಾಲ್ಗೊಂಡಿರುವುದು ಉತ್ತಮ ಕಾರ್ಯ ಎಂದು ಹೇಳಿದರು.
ಈ ಸಂದರ್ಭ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ನೀವು ಸ್ವಚ್ಛತೆ ಮಾಡದಿರುವುದರಿಂದ ಕೋಟೆ ಆವರಣ ಹೀಗಾಗಿದೆ ಎಂದು ಕಿಡಿಕಾರಿದರು.
ನೆಲ್ಲಿಹುದಿಕೇರಿಯಿಂದ ಮುತ್ತಪ್ಪ ಯುವ ಕಲಾ ಸಂಘದವರು ಬೆಳಿಗ್ಗೆ 9 ರಿಂದ ಸಂಜೆಯವರೆಗೂ ಸ್ವಚ್ಛತೆಯಲ್ಲಿ ಪಾಲ್ಗೊಂಡರು, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್ಸಿಸಿ ಕೆಡೆಟ್ಗಳು ಮೇಜರ್ ರಾಘವ ಮಾರ್ಗದರ್ಶನದಲ್ಲಿ ಎರಡು ಭಾನುವಾರ ಶ್ರಮದಾನದಲ್ಲಿ ಪಾಲ್ಗೊಂಡಿದ್ದಾರೆ.
ಶ್ರಮದಾನದಲ್ಲಿ ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಸ್ಥಾಪಕಾಧ್ಯಕ್ಷ ಚೆಯ್ಯಂಡ ಸತ್ಯ, ಪ್ರಧಾನ ಕಾರ್ಯದರ್ಶಿ ಪಿ.ಕೃಷ್ಣಮೂರ್ತಿ, ನಿರ್ದೇಶಕರಾದ ಮೋಂತಿ ಗಣೇಶ್, ಅಜ್ಜಮಾಡ ರಮೇಶ್ ಕುಟ್ಟಪ್ಪ, ಕುಕ್ಕೇರ ಜಯ ಚಿಣ್ಣಪ್ಪ, ಕಿರಿಯಮಾಡ ರತನ್ ತಮ್ಮಯ್ಯ, ಪೂಳಕಂಡ ರಾಜೇಶ್ ಪಾಲ್ಗೊಂಡಿದ್ದರು.