ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಹಲವು ಕೃಷಿಕರು ಚೆಂಡು ಹೂವು ಬೆಳೆದಿದ್ದು ಕಟಾವು ಮಾಡಲಾಗದ ಸಂಕಷ್ಟದಲ್ಲಿದ್ದಾರೆ. ಕಟಾವು ಮಾಡಿ, ಸಾಗಣೆ ವ್ಯವಸ್ಥೆಯಾದರೂ ಕೊಳ್ಳುವ ಗ್ರಾಹಕರಿಲ್ಲದಿರುವುದೇ ಕೃಷಿಕರ ಸಂಕಷ್ಟಕ್ಕೆ ಕಾರಣವಾಗಿದೆ. ಜನವರಿ ತಿಂಗಳಲ್ಲಿ ಚೆಂಡು ಹೂವು ಸಸಿಯನ್ನು ನಾಟಿ ಮಾಡಿ, ಮಾರ್ಚ್ ತಿಂಗಳಿನಿಂದ ಮೇ ವರೆಗೆ ಕಟಾವು ಮಾಡಲಾಗುತ್ತದೆ. ಎಕರೆಗೆ ₹ 25 ರಿಂದ 50 ಸಾವಿರ ವೆಚ್ಚ ಮಾಡಿದರೆ,3-4 ಟನ್ ಇಳುವರಿ ಸಿಗುತ್ತದೆ. ಆದರೆ, ಈಗ ಬೆಳೆ ಕಟಾವಿಗೆ ಬಂದಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.