ಮಡಿಕೇರಿ: ವಾಮಾಚಾರ ನಡೆಸುವ ವೇಳೆ ಮಹಿಳೆಯೊಬ್ಬರಿಗೆ ತ್ರಿಶೂಲದಲ್ಲಿ ಹೊಡೆದು ಕೊಲೆ ಮಾಡಿದ ನಾಲ್ವರಿಗೆ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯವು ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದೆ.
ದುರ್ಗದತ್ತ ಕಾಳಿದಾಸಸ್ವಾಮಿಯು ತನ್ನ ಮೇಲೆ ದೇವರು ಬರುತ್ತದೆ ಎಂದು ನಂಬಿಸಿ ಬೋಯಿಕೇರಿ ಇಬ್ನಿವಳವಾಡಿ ಗ್ರಾಮದ ಧರಣಿ ಬೊಳ್ಳವ್ವ ಅವರ ಮನೆಯನ್ನೇ ದೇವಸ್ಥಾನದಂತೆ ಮಾಡಿಕೊಂಡ. ಕಾಲಕ್ರಮೇಣ ಸಾರ್ವಜನಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ಭೇಟಿ ನೀಡಲಾರಂಭಿಸಿದರು.
ಕಷ್ಟ ಹೇಳಿಕೊಳ್ಳಲು 2015ರ ಅಕ್ಟೋಬರ್ 11ರಂದು ಬಂದ ಅದೇ ಗ್ರಾಮದ ಆಶಾ ಎಂಬುವವರನ್ನು ಮರುದಿನ ಮುಂಜಾನೆಯವರೆಗೂ ಮನೆಯಲ್ಲಿರಿಸಿಕೊಂಡು ಕೈಯಲ್ಲಿ ಕರ್ಪೂರ ಇಟ್ಟು ಉರಿಸಿ, ವಾಮಾಚಾರದ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ತ್ರಿಶೂಲದಿಂದ ಹೊಡೆದು ಆರೋಪಿಗಳು ಕೊಲೆ ಮಾಡಿದ್ದರು.
ಪ್ರಕರಣವನ್ನು ದಾಖಲಿಸಿಕೊಂಡಿದ್ದ ಮಡಿಕೇರಿ ಗ್ರಾಮಾಂತರ ಠಾಣೆಯ ಅಂದಿನ ಸಿಪಿಐ ಎ.ಕರೀಂ ರಾವುತರ್ ಅವರು ಆರೋಪಿಗಳನ್ನು ಬಂಧಿಸಿ, ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಜಿ.ಪ್ರಶಾಂತಿ ಅವರು ಆರೋಪಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದರು. ಪಬ್ಲಿಕ್ ಪ್ರಾಸಿಕ್ಯೂಟರ್ಗಳಾದ ಕೃಷ್ಣವೇಣಿ ಹಾಗೂ ಎನ್.ಪಿ.ದೇವೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.