ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೃಶ್ಯ ವೈಭವ, ಮನಸೆಳೆದ ಕಥಾನಕ, ಶೋಭಾಯಾತ್ರೆಯ ಸಂಗೀತದ ಅಲೆಯಲ್ಲಿ ತೇಲಿದ ಯುವಪಡೆ

Last Updated 20 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಮಡಿಕೇರಿ: ಅಬ್ಬರದ ಸಂಗೀತ, ಅದಕ್ಕೆ ತಕ್ಕಂತೆ ಯುವಪಡೆಯ ಹೆಜ್ಜೆ, ಧರೆಗಿಳಿದ ದೃಶ್ಯ ವೈಭವ, ಮನಸೆಳೆದ ಪೌರಾಣಿಕ ಕಥಾ ಸಾರಾಂಶ, ಭಜನೆ, ನೃತ್ಯ, ಹಾಡು, ಕೊಡವ ವಾಲಗಕ್ಕೆ ಮನಸೋತ ಪ್ರೇಕ್ಷಕರು...

– ಇದು ‘ಮಂಜಿನ ನಗರಿ’ ಮಡಿಕೇರಿಯಲ್ಲಿ ಶುಕ್ರವಾರ ರಾತ್ರಿಯಿಡೀ ನಡೆದ ದಸರೆ ಶೋಭಾಯಾತ್ರೆಯ ವೈಭವಗಳು.

ಭೂಕುಸಿತದ ಸಂಕಷ್ಟಕ್ಕೆ ಸಿಲುಕಿದ್ದ ಕೊಡಗು ಜಿಲ್ಲೆಯ ಮಡಿಕೇರಿ ಹಾಗೂ ಗೋಣಿಕೊಪ್ಪಲಿನಲ್ಲಿ ದಸರೆ ನಡೆಯುವುದೇ ಅನುಮಾನವಾಗಿತ್ತು. ಆದರೆ, ಸಮಿತಿಗಳ ಸಾಂಘಿಕ ಪ್ರಯತ್ನದಿಂದ ಎರಡು ಕಡೆಯೂ ದಸರಾಗೆ ಯಶಸ್ವಿ ಆಗಿ ಶನಿವಾರ ಮುಂಜಾನೆ ತೆರೆಬಿತ್ತು.

ಗೋಣಿಕೊಪ್ಪಲಿನಲ್ಲಿ ಕೆಲವು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಿಸಿದವು. ಆದರೆ, ಮಡಿಕೇರಿಯಲ್ಲಿ ವಿಜಯದಶಮಿಯ ರಾತ್ರಿಗೆ ಮಾತ್ರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸೀಮಿತಗೊಳಿಸಲಾಗಿತ್ತು. ಸಮಯದ ಅಭಾವ, ಒತ್ತಡದ ನಡುವೆಯೂ ಮಡಿಕೇರಿ ದಸರಾಕ್ಕೆ ಬಂದವರಿಗೆ ನಿರಾಸೆ ಆಗದಂತೆ ಕಲಾ ಸಂಭ್ರಮ ವೇದಿಕೆಯಲ್ಲಿ ಕಾರ್ಯಕ್ರಮಗಳು ಮೂಡಿಬಂದವು.

ರಾತ್ರಿಯಿಡೀ ಅಬ್ಬರವಿಲ್ಲದೇ ಭಕ್ತಿಭಾವ ತುಂಬುವ, ನಾಡಿನ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮಗಳು ನಡೆದಿದ್ದು ವಿಶೇಷ. ಸ್ಥಳೀಯ ಕಲಾವಿದರಿಗೆ ಪ್ರಾಮುಖ್ಯ ನೀಡುವ ಮೂಲಕ ಮನ್ನಣೆ ದೊರೆಯಿತು.

ಕಿಂಗ್ಸ್ ಆಫ್ ಕೂರ್ಗ್ ತಂಡ ಸ್ವಾಗತ ನೃತ್ಯ, ರಾಮಾಂಜನೇಯ ಭಜನಾ ಮಂಡಳಿ ಭಜನೆ ಹಾಗೂ ಕಾನೂರಿನ ಸುಳ್ಳಿಮಾಡ ಗೌರಮ್ಮ ತಂಡದಿಂದ ಕೊಡವ ಸಾಂಸ್ಕೃತಿಕ ನೃತ್ಯ, ಕುಡೆಕಲ್ ಸಂತೋಷ್ ನೇತೃತ್ವದಲ್ಲಿ ಅರೆಭಾಷೆ ಸಂಸ್ಕೃತಿ ಹಾಗೂ ಸೇನೆಯ ಮಹತ್ವವನ್ನು ಬಿಂಬಿಸುವ ರೂಪಕ, ಕಾನೂರಿನ ಗೆಜ್ಜೆತಂಡ ತಂಡದಿಂದ ಕೊಡವ ನೃತ್ಯ, ಸಂವೇದಿತಾ ಅವರ ‘ಗಾನಸುಧೆ’, ಸೋಮವಾರಪೇಟೆ ಗಂಧರ್ವ ತಂಡದಿಂದ ಜಾನಪದ ಗೀತೆ, ಮಡಿಕೇರಿ ಮಲೆಯಾಳಂ ಸಂಘದಿಂದ ತಿರುವಾದಿರ ನೃತ್ಯ ಪ್ರೇಕ್ಷಕರ ಗಮನ ಸೆಳೆದವು.

ದಶಮಂಟಪಗಳ ಶಿಸ್ತು: ಈ ಬಾರಿ ದಶಮಂಟಪ ‍ಪ್ರದರ್ಶನಕ್ಕೆ ಬಹುಮಾನ ಇರಲಿಲ್ಲ. ಪ್ರತಿ ಮಂಟಪದ ಖರ್ಚಿಗೆಂದು ₹ 2 ಲಕ್ಷ ನೀಡಲು ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಕೆಲವು ಮಂಟಪಗಳು ಅದ್ಧೂರಿತನಕ್ಕೆ ಒತ್ತು ನೀಡಿದ್ದರೆ, ಮತ್ತೆ ಕೆಲವು ಮಂಟಪಗಳು ಸರಳವಾಗಿದ್ದವು.

ವೀಕ್ಷಣೆಗೆ ಅನುಕೂಲ: ಪ್ರತಿವರ್ಷ ರಸ್ತೆಗಳು ಪ್ರವಾಸಿಗರಿಂದ ಗಿಜಿಗುಡುತ್ತಿದ್ದವು. ಈ ಬಾರಿ ಪ್ರವಾಸಿಗರ ಸಂಖ್ಯೆ ಕಡಿಮೆಯಿತ್ತು. ಎಲ್ಲ ಮಂಟಪಗಳು ಮೂರರಿಂದ ನಾಲ್ಕು ಪ್ರದರ್ಶನ ನೀಡಿದವು. ಅಟ್ಟಣಿಗೆ ವ್ಯವಸ್ಥೆಯೂ ಇರಲಿಲ್ಲ. ಶಿಸ್ತಿಗೆ ಹೆಚ್ಚು ಒತ್ತು ನೀಡಲಾಗಿತ್ತು. ಶನಿವಾರ ಬೆಳಿಗ್ಗೆ ಮಂಟಪಗಳು ಸ್ವಸ್ಥಾನಕ್ಕೆ ಮರಳಿದ್ದವು. ಹೀಗಾಗಿ, ವಾಹನ ಸಂಚಾರಕ್ಕೂ ಸಮಸ್ಯೆ ಆಗಲಿಲ್ಲ.

ಕೋಟೆ ಗಣಪತಿ ದೇವಸ್ಥಾನ ಸಮಿತಿಯಿಂದ ‘ಗಣಪತಿ ಮತ್ತು ಪರಶುರಾಮ ಕಾಳಗ’, ಚೌಟಿ ಮಾರಿಯಮ್ಮ ಮಂಟಪವು ‘ಶಿವ ಪುರಾಣ’, ಪೇಟೆ ಶ್ರೀರಾಮಂದಿರ ‘ನಂದಿಯಿಂದ ಶಿವ ದರ್ಶನ’, ದೇಚೂರು ಶ್ರೀರಾಮ ಮಂದಿರವು ‘ಪಂಚಮುಖಿ ಆಂಜನೇಯ ದರ್ಶನ’, ದಂಡಿನ ಮಾರಿಯಮ್ಮ ಮಂಟಪವು ‘ಆದಿ ಶಕ್ತಿಯಿಂದ ಶುಂಭ ನಿಶುಂಭ ಸಂಹಾರ’, ಚೌಡೇಶ್ವರಿ ಮಂಟಪವು ‘ಗಣಪತಿಯಿಂದ ಗಜಾಸುರ ಸಂಹಾರ’, ಕೋಟೆ ಮಾರಿಯಮ್ಮ ಮಂಟಪವು ‘ದಕ್ಷ ಯಜ್ಞ’, ಕೋದಂಡ ರಾಮಮಂದಿರ ಮಂಟಪವು ‘ಚಂಡ ಮುಂಡ ಸಂಹಾರ’, ಕರವಲೆ ಭಗವತಿ ಮಂಪಟವು ‘ಶ್ರೀದೇವಿ ಮಹಾತ್ಮೆ’, ಕಂಚಿ ಕಾಮಾಕ್ಷಿಯಮ್ಮ ದೇವಸ್ಥಾನ ಮಂಟಪವು ‘ಗಜಾಸುರ ವಧೆ’ ಪೌರಾಣಿಕ ಕಥಾ ಸಾರಾಂಶವನ್ನು ಪ್ರಸ್ತುತ ಪಡಿಸಿದವು.

ಮದ್ಯ ವಶ, ಪ್ರವಾಸಿಗರಿಗೆ ನಿರಾಸೆ: ಆಯುಧ ಪೂಜೆ, ವಿಜಯದಶಮಿ ಶೋಭಾಯಾತ್ರೆ ಅಂಗವಾಗಿ ಮುಂಜಾಗ್ರತಾ ಕ್ರಮವಾಗಿ 10 ಕಿ.ಮೀ. ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಶೋಭಾಯಾತ್ರೆಗೆ ಬಂದಿದ್ದ ಮದ್ಯಪ್ರಿಯರು ವೈನ್‌ ಶಾಪ್‌ಗಾಗಿ ಹುಡುಕಾಟ ನಡೆಸಿ ಸೋತರು. ಕೊನೆಗೆ ಎಲ್ಲಿಯೂ ಸಿಗದಿದ್ದಾಗ ನಿರಾಸೆ ಅನುಭವಿಸಿದರು. ಆದರೆ, ಬೇರೆ ಊರಿನಿಂದ ಕಾರುಗಳಲ್ಲಿ ಮದ್ಯ ತರುತ್ತಿದ್ದವರು ಚೆಕ್‌ಪೋಸ್ಟ್‌ಗಳಲ್ಲಿ ಸಿಕ್ಕಿಬಿದ್ದರು. ಮದ್ಯದ ಬಾಟಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ‘ಕಿಕ್‌’ ಇಲ್ಲದೇ ಶೋಭಾಯಾತ್ರೆ ಸವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT