ಕುಶಾಲನಗರ: ಸಮೀಪದ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ರೈತ ಚಂದ್ರಶೆಟ್ಟಿ ಅವರು ಬೆಳೆದಿದ್ದ ಎಲೆಕೋಸು ಅನ್ನು ಉಚಿತವಾಗಿ ಜನರಿಗೆ ತೆಗೆದುಕೊಂಡು ಹೋಗಲು ಗುರುವಾರ ಅವಕಾಶ ಮಾಡಿಕೊಟ್ಟರು.
ಬ್ಯಾಡಗೊಟ್ಟ, ಮದಲಾಪುರ, ಹೆಗ್ಡಳ್ಳಿ, ಕೊಪ್ಪಲು, ಹಳೆಕೂಡಗಿ, ಭುವನಗಿರಿ ಮುಂತಾದ ಗ್ರಾಮಗಳ ಜನರು ಕೊರೊನಾ ಭೀತಿಯನ್ನು ಲೆಕ್ಕಿಸದೆ ಹೊಲಕ್ಕೆ ಲಗ್ಗೆ ಹಾಕಿ ಚನ್ನಾಗಿರುವ ಎಲೆಕೋಸಿಗಾಗಿ ಹುಡುಕಾಟ ನಡೆಸಿದರು.
ಕೊಳೆತು ಹೋಗಿರುವ ಬೆಳೆಯ ಮಧ್ಯೆ ಚನ್ನಾಗಿರುವ ಎಲೆಕೋಸುಗಳನ್ನು ಚೀಲದಲ್ಲಿ ತುಂಬಿಕೊಂಡು, ಕೈಯಲ್ಲಿ ಮೂರ್ನಾಲ್ಕು ಎತ್ತಿಕೊಂಡು ತಮ್ಮ ಮನೆಗಳಿಗೆ ಹೋದರು.
‘ಹೊಲದಲ್ಲಿ ಎಲೆಕೋಸು ಕೊಳೆತು ಮಣ್ಣಾಗುವ ಬದಲು ಗ್ರಾಮದ ಜನರಿಗಾದರೂ ಉಪಯೋಗಿಸಲಿ ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡೆ’ ಎಂದು ರೈತ ಚಂದ್ರಶೆಟ್ಟಿ ತಿಳಿಸಿದರು.