ಮಡಿಕೇರಿ: ಕೊಡಗು ಜಿಲ್ಲೆಯ ಕೆಲವೆಡೆ ಶುಕ್ರವಾರ ನಸುಕಿನಲ್ಲಿ ಭೂಮಿ ಎರಡು ಬಾರಿ ಕಂಪಿಸಿದೆ.
ಇಲ್ಲಿನ ಸಂಪಾಜೆ, ಪೆರಾಜೆ, ಗೂನಡ್ಕ ವ್ಯಾಪ್ತಿಯಲ್ಲಿ ನಸುಕಿನ 1.15 ರಿಂದ 1.40 ರ ಅವಧಿಯಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ. ಮಲಗಿದ್ದ ಜನರು ಗಾಬರಿಯಿಂದ ಮನೆಯಿಂದ ಹೊರಗೆ ಬಂದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಕುರಿತು ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ಪರಿಣತ ಅನನ್ಯ ವಾಸುದೇವ್, 'ಭೂಮಿ ಕಂಪಿಸಿದ ಕುರಿತ ಮಾಹಿತಿ ಬಂದಿದೆ. ರಿಕ್ಟರ್ ಮಾಪಕದ ದತ್ತಾಂಶಗಳನ್ನು ವಿಶ್ಲೇಷಿಸುವ ಕಾರ್ಯ ನಡೆಯುತ್ತಿದೆ. ಬಳಿಕವಷ್ಟೇ ತೀವ್ರತೆಯನ್ನು ಹೇಳಬಹುದು' ಎಂದರು.
ಗುರುವಾರವಷ್ಟೆ ಭೂವಿಜ್ಞಾನಿಗಳ ತಂಡ ಇಲ್ಲಿ ಭೂಕಂಪನ ಮಾಪನ ಉಪ ಕೇಂದ್ರ ಸ್ಥಾಪಿಸಿತ್ತು. ಪದೇ ಪದೇ ಭೂಕಂಪನ ಸಂಭವಿಸುತ್ತಿರುವುದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ.