ಸಿದ್ದಾಪುರ: ಮಾಲ್ದಾರೆ ಗ್ರಾಮ ಪಂಚಾಯಿತಿಯ ಘಟ್ಟದಳ ಎಂಬಲ್ಲಿ ಭಾನುವಾರ ರಾತ್ರಿ ಕಾಡಾನೆ ದಾಳಿ ನಡೆಸಿದ ಪರಿಣಾಮ ಕಾರ್ಮಿಕಕರಿಯ (53) ಸ್ಥಳದಲ್ಲೇ ಸಾವನ್ನಪ್ಪಿದರು.
ಇಲ್ಲಿನ ಕೀತಿಯಂಡ ಅಪ್ಪಚ್ಚು ಅವರ ಎಸ್ಟೇಟ್ನಲ್ಲಿ ಕೆಲಸ ಮಾಡುತ್ತಿದ್ದ ಅವರು ರಾತ್ರಿ 10.30ರಲ್ಲಿ ಸಮೀಪದ ಅಂಗಡಿಯಿಂದ ಮನೆಗೆ ತೆರಳುತ್ತಿದ್ದಾಗ ಕಾಡಾನೆ ಏಕಾಏಕಿ ದಾಳಿ ನಡೆಸಿತ್ತು. ಅರಣ್ಯ ಇಲಾಖೆಯಿಂದ ₹2 ಲಕ್ಷ ಪರಿಹಾರವನ್ನು ಅವರ ಕುಟುಂಬದವರಿಗೆ ನೀಡಲಾಗಿದೆ.
ನೆಚೌಕೂರು ವನ್ಯಜೀವಿ ಸಂರಕ್ಷಣಾ ವಲಯದ ಎ.ಸಿ.ಎಫ್ ಸತೀಶ್, ಆರ್.ಎಫ್.ಓ ಕಿರಣ್ ಕುಮಾರ್, ಡಿ.ಸಿ.ಎಫ್ ಮಹೇಶ್ ಕುಮಾರ್, ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ಭೇಟಿ ನೀಡಿದ್ದರು.
ಮಾಲ್ದಾರೆ, ಘಟ್ಟದಳ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಆನೆ ಹಿಂಡು ದಾಂಧಲೆ ನಡೆಸುತ್ತಿವೆ. ಫಸಲನ್ನು ನಾಶ ಪಡಿಸುತ್ತಿದ್ದು, ಕೆಲಸ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಾನೆಗಳನ್ನು ಕೂಡಲೇ ಕಾಡಿಗೆ ಅಟ್ಟಬೇಕೆಂದು ಕೀತಿಯಂಡ ಅಪ್ಪಚ್ಚು ಒತ್ತಾಯಿಸಿದ್ದಾರೆ.