ಸಿದ್ದಾಪುರ: ಕೊಡಗಿನ ವಾಲ್ನೂರು ಹಾಗೂ ತ್ಯಾಗತ್ತೂರು ಭಾಗದಲ್ಲಿ ಶನಿವಾರ ಒಟ್ಟಿಗೆ 23 ಕಾಡಾನೆಗಳು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದವು. ಕಾಡಾನೆ ಹಿಂಡನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಕೊನೆಗೂ ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾದರು.
ಕಾಡಾನೆಗಳು ಬೆಳೆ ನಾಶ ಮಾಡುತ್ತಿದ್ದವು. ಇದರಿಂದ ಗ್ರಾಮಸ್ಥರೂ ಭಯಗೊಂಡಿದ್ದರು. ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸಿ ದುಬಾರೆ ಮೀಸಲು ಅರಣ್ಯಕ್ಕೆ ಅಟ್ಟಿದರು.
ಕಾಡಾನೆ ಹಿಂಡಿನಲ್ಲಿ ಸಲಗ, 5 ಮರಿಗಳು ಸೇರಿದಂತೆ 23 ಕಾಡಾನೆಗಳು ಇದ್ದವು. ಅವುಗಳು ತೋಟದಲ್ಲಿ ಓಡಾಡುತ್ತಿದ್ದ ದೃಶ್ಯ ಅರಣ್ಯ ಇಲಾಖೆ ಸಿಬ್ಬಂದಿಯ ಮೊಬೈಲ್ನಲ್ಲಿ ಸೆರೆಯಾಗಿದ್ದು, ಆನೆಗಳು ಪರೇಡ್ ನಡೆಸಿದಂತೆ ಕಾಣಿಸುತ್ತದೆ.
ಕುಶಾಲನಗರ ವಲಯ ಅರಣ್ಯಾಧಿಕಾರಿ ಅರುಣ್, ಉಪ ವಲಯ ಅರಣ್ಯಾಧಿಕಾರಿ ವಿಲಾಸ್, ಅರಣ್ಯ ರಕ್ಷಕ ಚರಣ್, ವೀಕ್ಷಕ ಜಗದೀಶ್, ಸಿಬ್ಬಂದಿಗಳಾದ ವಾಸುದೇವ, ಧರ್ಮಪಾಲ್, ಆಲ್ಬರ್ಟ್, ಅಪ್ಪಾಸ್ವಾಮಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.