ನವದೆಹಲಿ: ಲೋಕಪಾಲ ಆಯ್ಕೆ ಸಮಿತಿ ಸಭೆಯನ್ನು ಕಾಂಗ್ರೆಸ್ ಪುನಃ ಬಹಿಷ್ಕರಿಸಿದ್ದು, ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ.
‘ಆಯ್ಕೆ ಪ್ರಕ್ರಿಯೆಯಲ್ಲಿ ವಿರೋಧ ಪಕ್ಷದ ಅಭಿಪ್ರಾಯವನ್ನು ನಿರ್ಲಕ್ಷಿಸುವ ಏಕೈಕ ಉದ್ದೇಶದಿಂದ, ‘ವಿಶೇಷ ಆಹ್ವಾನಿತ’ ಎಂದು ಸರ್ಕಾರ ನನ್ನನ್ನು ಸಭೆಗೆ ಆಹ್ವಾನಿಸಿದೆ’ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಆಹ್ವಾನ ತಿರಸ್ಕರಿಸಿರುವ ಖರ್ಗೆ, ‘ಲೋಕಪಾಲಕ್ಕೆ ಸರ್ಕಾರ ಆದ್ಯತೆ ಮತ್ತು ಪ್ರಾಮುಖ್ಯ ನೀಡಿಲ್ಲ. ಈ ವಿಷಯದಲ್ಲಿ ಸರ್ಕಾರದ ಇಬ್ಬಗೆಯ ಧೋರಣೆ ಬಹಿರಂಗವಾಗಿದೆ’ ಎಂದು ಆರೋಪಿಸಿದ್ದಾರೆ.
ಈ ಹಿಂದೆಯೂ ಇದೇ ರೀತಿ ಕರೆಯಲಾಗಿದ್ದ ಸಭೆಯನ್ನು ಬಹಿಷ್ಕರಿಸಿ ಖರ್ಗೆ ಅವರು ಮಾರ್ಚ್ 1ರಂದು ಪ್ರಧಾನಿಗೆ ಪತ್ರ ಬರೆದಿದ್ದರು.