ಹಾವೇರಿ: ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಹಾಸನಕ್ಕೆ ವರ್ಗಾವಣೆಗೊಂಡಿದ್ದಾರೆ ಎಂಬ ವದಂತಿ ಬುಧವಾರ ಹಾವೇರಿ ಮತ್ತು ಹಾಸನದಲ್ಲಿ ಹಬ್ಬಿತ್ತು.
ವದಂತಿಯ ಹಿನ್ನೆಲೆಯಲ್ಲಿ ಹಲವರು ‘ಪ್ರಜಾವಾಣಿ’ಗೆ ಕರೆ ಮಾಡಿ, ಮಾಹಿತಿ ಕೇಳಿದರು. ಆದರೆ, ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ಅವರು, ವರ್ಗಾವಣೆ ಕುರಿತ ವದಂತಿಗಳನ್ನು ನಿರಾಕರಿಸಿದರು. ‘ಯಾವುದೇ ಆದೇಶಗಳು ಬಂದಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ಹಾವೇರಿ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಲ್ಲಿ ಹಲವಾರು ಯೋಜನೆ, ಕಾಮಗಾರಿಗಳು ಹಾಗೂ ಆಡಳಿತಾತ್ಮಕ ಶಿಸ್ತುಬದ್ಧ ಕ್ರಮಗಳು ಜಾರಿಯಲ್ಲಿವೆ. ಇಂತಹ ಸಂಕ್ರಮಣ ಸ್ಥಿತಿಯಲ್ಲಿ ಜಿಲ್ಲಾಧಿಕಾರಿಗಳ ವರ್ಗಾವಣೆ ಮಾಡಬಾರದು. ಇದು ಜಿಲ್ಲೆಯ ಅಭಿವೃದ್ಧಿಗೆ ಪೂರಕವಲ್ಲ’ ಎಂದು ಹಲವು ಮುಖಂಡರು ಸರ್ಕಾರಕ್ಕೆ ಆಗ್ರಹಿಸಿದರು.